ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಬಗ್ಗೆ ನಮಗೆ ನಂಬಿಕೆ ಇಲ್ಲ: ಸುನಿಲ್ ಕುಮಾರ್

ಬೆಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಬಗ್ಗೆ ನಮಗೆ ನಂಬಿಕೆ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿರುವ ಕಾಂಗ್ರೆಸ್, ಪಾದಯಾತ್ರೆ ಮಾಡುತ್ತಿದೆ. ನ್ಯಾಯಾಲಯದ ಆದೇಶಕ್ಕೂ ಗೌರವ ಕೊಡದ ಮೇಲೆ ಇವರು ಇನ್ನು ಯಾರಿಗೆ ಗೌರವ ಕೊಡುತ್ತಾರೆ. ಜನರೇ ಇವರನ್ನು ಪ್ರಶ್ನೆ ಮಾಡುವ ಕಾಲ ಬರಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯ ಆದೇಶ ಮಾಡಿದ್ದು, ಅದಕ್ಕೆ ಅವರು ಸಹಕರಿಸಬೇಕಿದೆ ಎಂದರು. ಇದನ್ನೂ ಓದಿ: ಖಾಸಗಿ ಲ್ಯಾಬ್‍ಗಳಲ್ಲೂ ಉಚಿತ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಎಎಪಿ ಆಗ್ರಹ

ಕೈ ನಾಯಕರು ಕೋರ್ಟ್ ಆದೇಶದ ಬಳಿಕವೂ ಎಚ್ಚೆತ್ತುಕೊಂಡಿಲ್ಲ. ಗೃಹ ಇಲಾಖೆ ಅವರ ಬಗ್ಗೆ ಕ್ರಮ ಕೈಗೊಳ್ಳಲಿದೆ. ಅವರೂ ಕೂಡಾ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದವರು. ಬೆಳಗಾವಿಯಲ್ಲಿ ಕನ್ನಡ, ಧ್ವಜ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿದ್ದೆವು. ಆದರೆ ಇದು ನೀರಿನ ವಿಚಾರವಾಗಿ ನಡೆಯುತ್ತಿರುವ ಪಾದಯಾತ್ರೆ ಅಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಯಾರು ದೊಡ್ಡವರು ಅನ್ನೋ ಪೈಪೋಟಿ ಹೋರಾಟವಾಗಿದೆ ಎಂದು ನುಡಿದರು.

ದೇಶದಲ್ಲಿ ತುರ್ತ ಪರಿಸ್ಥಿತಿ ಹೇರಿದ ಕಾಂಗ್ರೆಸ್‍ನಿಂದ ಕಾನೂನಿನ ರಕ್ಷಣೆ ಆಗುತ್ತೆ ಎಂದು ಯಾವತ್ತೂ ಅನ್ನಿಸಿಲ್ಲ. ನೆಲದ ಕಾನೂನು ಗೌರವಿಸಬೇಕು ಎಂದು ಕೈ ಪಕ್ಷಕ್ಕೆ ಯಾವತ್ತೂ ಅನ್ನಿಸಿಲ್ಲ. ದೊಡ್ಡ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣಕ್ಕಾಗಿ ಜನ ಬವಣೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಕಾಂಗ್ರೆಸ್‍ಗೆ ನಾಚಿಕೆ ಆಗಬೇಕು ಎಂದು ಸಿಡಿದರು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

ಕೋವಿಡ್‍ನಿಂದ ಹೆಚ್ಚಿನ ಪ್ರಮಾಣದಲ್ಲಿ ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ, ಹೋಂ ಐಸೋಲೇಷನ್ ಆಗುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೂ ಗೌರವ ಕೊಡಲ್ಲ ಅಂತಾದರೆ ಇವರು ಯಾರಿಗೆ ಗೌರವ ಕೊಡುತ್ತಾರೆ. ಕಾನೂನು ಸರ್ಕಾರದ ಸುತ್ತೋಲೆಗಳಿಗೆ ಗೌರವ ಕೊಡಲ್ಲ ಅಂತಾದರೆ ಬೇರೆ ಯಾರಿಗೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *