ರೈತರಿಗೆ ಸಹಾಯವಾಗಲು ಕೋಲ್ಡ್ ಸ್ಟೋರೇಜ್ ಮಂಜೂರು: ಬಿ.ಸಿ ಪಾಟೀಲ್

ಕಲಬುರಗಿ: ರೈತರು ಬೆಳೆದ ಹಣ್ಣು ಮತ್ತು ತರಕಾರಿ ಬೆಳೆಗಳು ಹಾಳಾಗದಂತೆ ಶೇಖರಣೆ ಮಾಡಲು ಕಲಬುರಗಿಯಲ್ಲಿ 9.80 ಕೋಟಿ ರೂ. ವೆಚ್ಚದಲ್ಲಿ 5000 ಮೆಟ್ರಿಕ್ ಟನ್ ಸಾಮಥ್ರ್ಯದ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲು ಮಂಜೂರಾತಿ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಇಂದು ನಗರದ ಜೇವರ್ಗಿ ರಸ್ತೆಯಲ್ಲಿ ಕೋಟನೂರ(ಡಿ) ರೈತ ಸಂಪರ್ಕ ಕೇಂದ್ರದ ಹಿಂದುಗಡೆ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯಿಂದ 1 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಗುಣ ನಿಯಂತ್ರಣ ತರಬೇತಿ ಕೇಂದ್ರವನ್ನು ನಿರ್ಮಿಸಲಾಗಿತ್ತು. ಅದನ್ನು ಬಿ.ಸಿ.ಪಾಟೀಲ್ ಅವರು ಉದ್ಘಾಟಿಸಿದರು. ಇದನ್ನೂ ಓದಿ: ಯಾವುದೋ ಊರಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಮಾಡಿ: ಈಶಪ್ರೀಯ ತೀರ್ಥ ಸ್ವಾಮೀಜಿ

ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಕಲಬುರಗಿಯಲ್ಲಿ ಬೆಳೆದ ದ್ರಾಕ್ಷಿಗಳು ಮಾರಾಟವಾಗದೆ ರೈತರು ರಸ್ತೆಗೆ ಚೆಲ್ಲಿದನ್ನು ಕಣ್ಣಾರೆ ಕಂಡಿದ್ದೇನೆ. ಇದನ್ನು ತಪ್ಪಿಸಬೇಕೆಂದು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಸರ್ಕಾರದಿಂದಲೇ ಕೋಲ್ಡ್ ಸ್ಟೋರೇಜ್ ನಿರ್ಮಿಸಲು ನಿರ್ಧರಿಸಿ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.

ಮುಂದಿನ ಒಂದು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿ ಈ ವರ್ಷದ ಅಂತ್ಯದಲ್ಲಿಯೇ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ರೈತರಿಗೆ ಸಮರ್ಪಿಸಲಾಗುವುದು. ನೆರೆ ಹಾವಳಿಯಲ್ಲಿ ಹಾಳಾದ ಬೆಳೆಗಳಿಗೆ ಒಣ ಬೇಸಾಯದ ಪ್ರತಿ ಹೆಕ್ಟೇರ್ ಗೆ ಕೇಂದ್ರ ಸರ್ಕಾರದ 6,800 ರೂ. ಜೊತೆಗೆ ರಾಜ್ಯ ಸರ್ಕಾರದ 6,800 ರೂ., ನೀರಾವರಿ ಪ್ರದೇಶದ ಪ್ರತಿ ಹೆಕ್ಟೇರ್ ಗೆ ಕೇಂದ್ರ ಸರ್ಕಾರದ 13,500 ರೂ. ಜೊತೆಗೆ ರಾಜ್ಯ ಸರ್ಕಾರದ 11,500 ರೂ. ಹಾಗೂ ತೋಟಗಾರಿಕೆ ಬೆಳೆಗಳ ಪ್ರತಿ ಹೆಕ್ಟೇರ್ ಗೆ ಕೇಂದ್ರ ಸರ್ಕಾರದ 18,000 ರೂ. ಜೊತೆಗೆ ರಾಜ್ಯ ಸರ್ಕಾರದ 7,000 ರೂ. ಸೇರಿಸಿ ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಿದೆ ಎಂದು ಮಾಹಿತಿ ನೀಡಿದರು.

 

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ ರೈತರ ಹಿತದೃಷ್ಟಿಯಿಂದ ಕಲಬುರಗಿ ನಗರದ ಎಂ.ಎಸ್.ಕೆ.ಮಿಲ್ ಪ್ರದೇಶದಲ್ಲಿ ಕೆಕೆಅರ್‌ಡಿಬಿ ಮಂಡಳಿಯಿಂದ 30 ಕೋಟಿ ರೂ. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಇದಲ್ಲದೆ ಪ್ರದೇಶದಲ್ಲಿ ಬೆಳೆದ ಬೆಳೆಗಳಿಗೆ ಡ್ರೋನ್ ಮೂಲಕ ಔಷಧಿ ಸಿಂಪಡಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಇದನ್ನೂ ಓದಿ: ಬಿಬಿಎಂಪಿಗೆ ಪತ್ರ ಬರೆದ ನೈಜ ಹೋರಾಟಗಾರರ ವೇದಿಕೆ

ಕಾರ್ಯಕ್ರಮದಲ್ಲಿ ಸಂಸದ ಡಾ.ಉಮೇಶ್, ಜಿ.ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ್ ಉಮೇಶ್ ಜಾಧವ್, ವಿಧಾನ ಪರಿಷತ್ ಶಾಸಕರಾದ ಡಾ.ಬಿ.ಜಿ.ಪಾಟೀಲ್, ಜಿ.ನಮೋಶಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಕೋಟನೂರ್ (ಡಿ) ಕೃಷಿ ಇಲಾಖೆಯ ಆವರಣದಲ್ಲಿ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತದಿಂದ ರೈತರ ತರಬೇತಿ ಕೇಂದ್ರ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಕಟ್ಟಡಕ್ಕೆ 2 ಕೋಟಿ ರೂ. ವೆಚ್ಚವಾಗುತ್ತೆ ಎಂದು ಅಂದಾಜಿಸಲಾಗಿದೆ. ಈ ಕಟ್ಟಡಕ್ಕೂ ಸಹ ಬಿ.ಸಿ.ಪಾಟೀಲ್ ಅವರು ಶಂಕುಸ್ಥಾಪನೆ ನೆರವೇರಿಸಿದರು.

Comments

Leave a Reply

Your email address will not be published. Required fields are marked *