ಗದಗಿಗೆ ಸಿಎಂ ಬಾರ್ತಾರೆಂದು ತರಾತುರಿಯಲ್ಲಿ ರಸ್ತೆ ದುರಸ್ತಿ

ಗದಗ: ಭಾನುವಾರ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನದ ಹಿನ್ನೆಲೆ ಗದಗ-ಬೆಟಗೇರಿ ಅವಳಿ ನಗರದ ಹದಗೆಟ್ಟ ರಸ್ತೆಗಳಿಗೆ ತೇಪೆ ಹಾಕಲಾಗುತ್ತಿದೆ.

ಕಳೆದ 2 ವರ್ಷದಿಂದ ಅವಳಿ ನಗರಗಳ ರಸ್ತೆ ಪರಿಸ್ಥಿತಿ ಅಯೋಮಯವಾಗಿದೆ. ಸ್ಥಳೀಯರು, ಆಟೋ ಚಾಲಕರು ರಸ್ತೆ ದುರಸ್ಥಿಗೆ ಸಾಕಷ್ಟು ಮನವಿ ಮಾಡಿದರೂ ರಸ್ತೆ ರಿಪೇರಿ ಆಗಿರಲಿಲ್ಲ. ಈಗ ಸಿಎಂ ಬರುತ್ತಾರೆಂದು ಕಾಟಾಚಾರಕ್ಕೆ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ಇದನ್ನೂ ಓದಿ: ಕ್ಯಾನ್ಸರ್ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕು ಸ್ಥಾಪನೆ

ಸಿಎಂ ಬಸವರಾಜ ಬೊಮ್ಮಾಯಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹುಬ್ಬಳ್ಳಿ ಮೂಲಕ ರಸ್ತೆ ಮಾರ್ಗವಾಗಿ ಗದಗ ನಗರಕ್ಕೆ ಬರಲಿದ್ದಾರೆ. ಹೀಗಾಗಿ ಸಿಎಂ ಸಂಚರಿಸುವ ಪ್ರಮುಖ ರಸ್ತೆಗಳ ರಿಪೇರಿ ಕಾರ್ಯ ಭರದಿಂದ ಸಾಗಿದೆ. ಜೆಸಿಬಿ ಬಳಸಿ ದೊಡ್ಡ ಜಲ್ಲಿ ಕಲ್ಲುಗಳನ್ನ ಹಾಕಿ, ಚಿಕ್ಕಪುಟ್ಟ ಡಾಂಬರ್ ಹಾಕಿ ಗುಂಡಿ ಮುಚ್ಚಲಾಗುತ್ತಿದೆ. ರಸ್ತೆ ತೇಪೆ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಶಾಶ್ವತ ರಸ್ತೆ ನಿರ್ಮಿಸಿ ಎಂದು ಜನರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್‌ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ

ಕಾಟಾಚಾರದ ರಸ್ತೆಗಳ ದುರಸ್ತಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನು ಖಂಡಿಸಿ ಅವಳಿ ನಗರದ ಆಟೋ ಚಾಲಕರು ಪ್ರತಿಭಟಿಸಿದರು. ನಗರದ ಕಾರ್ಯಪ್ಪ ಸರ್ಕಲ್ ಬಳಿ ರಸ್ತೆ ದುರಸ್ತಿ ಕಾಮಗಾರಿ ಸ್ಥಗಿತಗೊಳಿಸಿದರು. ಸಿಎಂ ಬರುತ್ತಾರೆಂದು ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಗುಂಡಿ ಮುಚ್ಚುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು. ಈ ರಸ್ತೆಗಳ ದುರಸ್ತಿಗೆ 2 ವರ್ಷದಿಂದ ಸಾಕಷ್ಟು ಪ್ರತಿಭಟಿಸಿ, ಮನವಿ ನೀಡಿದರೂ ಒಂದೇ ಒಂದು ಗುಂಡಿ ಮುಚ್ಚಲಿಲ್ಲ. ಈಗ ಸಿಎಂ ಬರುತ್ತಾರೆಂದು ತೇಪೆ ಸವರುವ ಕೆಲಸ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಕೆಂಡಾಮಂಡಲರಾದರು.

ಸಿಎಂ ಬರುವುದರಿಂದ ರಸ್ತೆಗಳು ರಿಪೇರಿ ಆಗುತ್ತವೆ ಎನ್ನುವುದಾದರೆ ನಮ್ಮ ಜಿಲ್ಲೆಗೆ ಪ್ರತಿ ವಾರಕ್ಕೊಮ್ಮೆ ಬಂದು ಹೋಗಲಿ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *