ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

ಬೆಂಗಳೂರು: ಕೋವಿಡ್ ನಿಂದ ಕುಟುಂಬದ ದುಡಿಯುವ ಸದಸ್ಯನನ್ನೇ ಕಳೆದುಕೊಂಡ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 1 ಲಕ್ಷ ರೂಪಾಯಿಗಳ ಪರಿಹಾರ ಘೋಷಣೆ ಮಾಡಿತ್ತು. ಅದರಂತೆ ಇಂದು ವಿಧಾನಸೌಧದಲ್ಲಿ 18 ಜನರಿಗೆ ಪರಿಹಾರ ನೀಡುವ ಮೂಲಕ ಕಂದಾಯ ಸಚಿವ ಆರ್ ಅಶೋಕ್ ರಾಜ್ಯಾದ್ಯಂತ ಪರಿಹಾರ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೋವಿಡ್ ಸಮಯದಲ್ಲಿ ಅನೇಕ ಕುಟುಂಬಗಳು ತಂದೆ, ತಾಯಿಗಳನ್ನು ಕಳೆದುಕೊಂಡಿವೆ. ಇನ್ನು ಕೆಲವರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅಂತವರ ನೆರವಿಗೆ ಸರ್ಕಾರ ನಿಲ್ಲಬೇಕು ಎನ್ನುವ ಕಾರಣಕ್ಕೆ ಒಂದು ಲಕ್ಷ ಪರಿಹಾರವನ್ನು ಬಿಪಿಎಲ್ ಕುಟುಂಬಕ್ಕೆ ನೀಡಲು ಇಂದಿನಿಂದ ಚಾಲನೆ ನೀಡಿದ್ದೇವೆ. ಒಟ್ಟು 7729 ಅರ್ಜಿಗಳು ಬಂದಿವೆ. ಅರ್ಜಿ ಸ್ವೀಕೃತಿ, ವಿತರಣೆಗೆ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದೇವೆ. ಎಲ್ಲ ನಾಡಕಚೇರಿ, ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದೇವೆ. ಪರಿಹಾರದ ಕುರಿತು ಆಕ್ಷೇಪಣೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೇವೆ ಎಂದರು.

ಸುಮಾರು 200 ಕೋಟಿಗೂ ಹೆಚ್ಚು ಹಣವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಹಣವನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಅಡಿಯಲ್ಲಿ ನೀಡುತ್ತಿದ್ದೇವೆ. ಕೋವಿಡ್ ನಿಂದ ಮೃತಪಟ್ಟವರ ಮಾಹಿತಿಯನ್ನು ಆರೋಗ್ಯ ಇಲಾಖೆಯಿಂದ ಪಡೆಯುತ್ತಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದಂತೆ, ಕೋವಿಡ್ ನಿಂದ ದಾಖಲಾಗದ ಸಾವಿನ ಮಾಹಿತಿಯನ್ನು ಕೂಡ ಪಡೆಯುತ್ತೇವೆ. ಇಂದು ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಿದ್ದೇವೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಹಣ ನೀಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ದಾಖಲೆಯ ಹೊಸ್ತಿಲಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ 

ಕೇಂದ್ರ ಸರ್ಕಾರ ರೂ. 50 ಸಾವಿರ ಘೋಷಣೆ ಮಾಡಿದೆ. ಆ ಹಣ ಇನ್ನೂ ಬಂದಿಲ್ಲ. ಆ ಹಣ ಬಂದ ಬಳಿಕ ಅದನ್ನು ಕೊಡುತ್ತೇವೆ. ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಕೊಡಲಿದೆ. ಇದು ರಾಜ್ಯ ಸರ್ಕಾರದ ನಿಲುವು. ಬಡಜನರ ಸಹಾಯಕ್ಕೆ ಸರ್ಕಾರ ಸದಾ ಸಿದ್ಧವಾಗಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *