‘ಲಂಕೆ’ ಕೈ ಹಿಡಿದ ಸಿನಿರಸಿಕರು – ಯಶಸ್ವಿ ಪ್ರದರ್ಶನ ಕಾಣುತ್ತಿದೆ ಯೋಗಿ ಸಿನಿಮಾ

ಲೂಸ್ ಮಾದ ಯೋಗಿ ಅಭಿನಯದ ಅದ್ದೂರಿ ಹಾಗೂ ಮಾಸ್ ಸಬ್ಜೆಕ್ಟ್ ಚಿತ್ರ ‘ಲಂಕೆ’ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗಣೇಶ ಹಬ್ಬಕ್ಕೆ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆಕಂಡು ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ದಿನದಿಂದ ದಿನಕ್ಕೆ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದ್ದು ಚಿತ್ರತಂಡದ ಸಂತಸವನ್ನು ದುಪ್ಪಟ್ಟು ಮಾಡಿದೆ.

ಔಟ್ ಅಂಡ್ ಔಟ್ ಕಮರ್ಶಿಯಲ್ ಚಿತ್ರ ‘ಲಂಕೆ’. ನೈಜ ಘಟನೆ ಆಧಾರಿತ ಲಂಕೆ ಚಿತ್ರದ ಮೂಲಕ ಯೋಗಿ ಕೂಡ ಗ್ರ್ಯಾಂಡ್ ಕಂ ಬ್ಯಾಕ್ ಮಾಡಿದ್ದಾರೆ. ಬಿಡುಗಡೆಯ ಮುನ್ನ ಯಾವ ನಿರೀಕ್ಷೆ ಹುಟ್ಟು ಹಾಕಿತ್ತೋ ಬಿಡುಗಡೆಯಾದ ಮೇಲೂ ಸಿನಿಮಾ ಚಿತ್ರಪ್ರೇಮಿಗಳನ್ನು ರಂಜಿಸುವಲ್ಲಿ ಅಷ್ಟೇ ಯಶಸ್ವಿಯಾಗಿದೆ. ಚಿತ್ರದ ಕಥೆ, ಯೋಗಿ ಮಾಸ್ ಅವತಾರ, ಖದರ್, ಕಮರ್ಶಿಯಲ್ ಎಳೆ ಎಲ್ಲವೂ ಚಿತ್ರರಸಿಕರನ್ನು ರಂಜಿಸಿದ್ದು ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ.

ಕೊರೋನಾ ಕಾಲದಲ್ಲೂ ಪ್ರೇಕ್ಷಕರು ಸಿನಿಮಾ ಮೇಲೆ ತೋರಿಸುತ್ತಿರುವ ಪ್ರೀತಿ ಚಿತ್ರತಂಡದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಚಿತ್ರಮಂದಿರದಲ್ಲಿ ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಅನುಮತಿಯಿದ್ದರೂ ಕೂಡ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡಿತ್ತು. ಆದ್ರೀಗ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಪ್ರೇಕ್ಷಕರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ದಿನದಿಂದ ದಿನಕ್ಕೆ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಹೀಗೆ ಚಿತ್ರಕ್ಕೆ ಎಲ್ಲಾ ಭಾಗದಲ್ಲೂ ಸಿಗುತ್ತಿರುವ ಅಭೂತಪೂರ್ವ ಬೆಂಬಲ ಚಿತ್ರತಂಡದ ಸಂತಸ ಹೆಚ್ಚಿಸಿದೆ. ಈ ಬಗ್ಗೆ ಹರುಷ ವ್ಯಕ್ತಪಡಿಸಿರುವ ನಿರ್ದೇಶಕ ರಾಮ್ ಪ್ರಸಾದ್ ದಿನದಿಂದ ದಿನಕ್ಕೆ ಚಿತ್ರಮಂದಿರಕ್ಕೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೊರೋನಾ ಕಾಲದಲ್ಲಿ ಜನ ಇದೇ ಮೊದಲು ಇಷ್ಟು ಪ್ರಮಾಣದಲ್ಲಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಚಿತ್ರದ ಮೇಲೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ವಿತರಕರು, ಪ್ರದರ್ಶಕರ ಸಂತಸವನ್ನೂ ಹೆಚ್ಚು ಮಾಡಿದೆ ಎಂದಿದ್ದಾರೆ.

ಇದೇ ಖುಷಿಯಲ್ಲಿ ಲಂಕೆ ಚಿತ್ರತಂಡ ಚಿತ್ರಮಂದಿರಗಳಿಗೂ ಭೇಟಿ ನೀಡಲು ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಅನುಪಮ ಹಾಗೂ ಮೈಸೂರಿನ ವುಡ್ ಲ್ಯಾಂಡ್ಸ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಚಿತ್ರತಂಡಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದ್ದು, ಜನರ ರೆಸ್ಪಾನ್ಸ್ ಕಂಡು ಚಿತ್ರತಂಡ ಸದ್ಯದಲ್ಲೇ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದೆ.

ಚಿತ್ರದಲ್ಲಿ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ ನಾಯಕಿಯರಾಗಿ ನಟಿಸಿದ್ದು, ಸಂಚಾರಿ ವಿಜಯ್, ಶರತ್ ಲೋಹಿತಾಶ್ವ, ಶೋಭರಾಜ್, ಸುಚೇಂದ್ರ ಪ್ರಸಾದ್, ಡ್ಯಾನಿ ಕುಟ್ಟಪ್ಪ ಒಳಗೊಂಡಂತೆ ಸ್ಟಾರ್ ಕಲಾವಿದರ ದಂಡು ಚಿತ್ರದಲ್ಲಿದೆ. ಕಾರ್ತಿಕ್ ಶರ್ಮಾ ಸಂಗೀತದಲ್ಲಿ ಹಾಡುಗಳು ಗಮನ ಸೆಳೆದಿದ್ದು, ರಮೇಶ್ ಬಾಬು ಛಾಯಾಗ್ರಹಣ ಚಿತ್ರಕ್ಕಿದೆ. ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಲ್ಲಿ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *