ಮೈಸೂರಿನತ್ತ ಪ್ರಯಾಣ ಬೆಳೆಸಿದ ದಸರಾ ಗಜಪಡೆ

ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲೆಂದು ಇಂದು ಐದು ಆನೆಗಳು ಕೊಡಗಿನಿಂದ ಮೈಸೂರಿನತ್ತ ಪ್ರಯಾಣ ಬೆಳೆಸಿದವು.

ಚಿತ್ತಾಕರ್ಶಕ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲೆಂದು ದುಬಾರೆ ಸಾಕಾನೆ ಶಿಬಿರದಿಂದ ಪಟ್ಟದ ಆನೆ ವಿಕ್ರಮ, ಕಾವೇರಿ ಹಾಗೂ ಧನಂಜಯ ಆನೆಗಳು ಹೊರಟರೆ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಹಾಗೂ ಗೋಪಾಲಸ್ವಾಮಿ ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಿದವು. ಇಂದು ಬೆಳಗ್ಗೆ ಕುಶಾಲನಗರ ಸಮೀಪದ ದುಬಾರೆಯಲ್ಲಿ ಸಾಕಾನೆಗಳಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಹಾಗೂ ವಿಶೆಷ ಆಹಾರ ನೀಡಿ ಬೀಳ್ಕೊಡಲಾಯಿತು. ಇದನ್ನೂ ಓದಿ: ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ- ಫುಲ್ ಟ್ರಾಫಿಕ್, ಪೊಲೀಸರ ಜೊತೆ ಪ್ರವಾಸಿಗರ ವಾಗ್ವಾದ

ಕೊಡಗು ಜಿಲ್ಲೆಯ ವಿವಿಧ ಸಾಕಾನೆ ಶಿಬಿರಗಳಿಂದ ಪ್ರತಿ ವರ್ಷ 5ಕ್ಕೂ ಹೆಚ್ಚು ಆನೆಗಳು ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಈಗಾಗಲೆ ಹಲವಾರು ಬಾರಿ ಜಂಬೂಸವಾರಿಯಲ್ಲಿ ಹೆಜ್ಜೆಹಾಕಿದ ಅನುಭವ ಇರುವ ಅಭಿಮನ್ಯು ಹಾಗೂ ಗೋಪಾಲಸ್ವಾಮಿಗಳ ಜೊತೆಗೆ ಕಾವೇರಿ, ವಿಕ್ರಮ ಹಾಗೂ ಧನಂಜಯ ಆನೆಗಳು ಕೂಡ ಇಂದು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

ಇಂದು ಸಂಜೆ ವೇಳೆಗೆ ವೀರನಹೋಸಹಳ್ಳಿಗೆ ಎಲ್ಲ ದಸರಾ ಆನೆಗಳು ತಲುಪಲಿದ್ದು, ನಾಳೆ ಬೆಳಗ್ಗೆ ಮೈಸೂರಿನತ್ತ ಪ್ರಯಾಣ ಬೆಳಸಲಿವೆ. ಮೈಸೂರಿನಲ್ಲಿ ಒಂದು ತಿಂಗಳು ಭರ್ಜರಿ ತಾಲೀಮಿನ ನಂತರ ಆನೆಗಳು ಜಂಬೂಸವಾರಿಗೆ ರೆಡಿಯಾಗಲಿವೆ. ಈ ಬಾರಿ ಸರಳ ದಸರಾ ಆಗುತ್ತಿರುವುದರಿಂದ ಆನೆಗಳ ಮಾವುತ ಹಾಗೂ ಕಾವಾಡಿಗಳು ಮಾತ್ರ ಮೈಸೂರಿನತ್ತ ತೆರಳಿದ್ದು, ದಸರಾ ಆನೆಗಳನ್ನು ಜಂಬೂಸವಾರಿಗೆ ಸನ್ನದ್ಧಗೊಳಿಸಲು ಹೊರಟಿದ್ದಾರೆ. ಈಗಾಗಲೇ ತಮ್ಮ ಆನೆಗಳಿಗೆ ವಿಶೇಷ ಆಹಾರ ಹಾಗೂ ಮೆರವಣಿಗೆ ತಾಲೀಮು ನೀಡಿ ಸಜ್ಜುಗೊಳಿಸಿಕೊಂಡಿರುವ ಮಾವುತರು, ಇದೀಗ ಮೈಸೂರಿನತ್ತ ಹೊರಟಿದ್ದು, ಅಲ್ಲಿಯೂ ಆನೆಗಳಿಗೆ ಮತ್ತಷ್ಟು ಪೌಷ್ಟಿಕ ಆಹಾರ ನೀಡಿ, ಆನೆಗಳನ್ನು ಮತ್ತಷ್ಟು ಸಬಲಗೊಳಿಸಲಿದ್ದಾರೆ.

Comments

Leave a Reply

Your email address will not be published. Required fields are marked *