ಕೋಲಾರದಲ್ಲಿ ಭಾರೀ ಮಳೆ- ಬೆಳೆಗಳು ಜಲಾವೃತ, ಸಂಕಷ್ಟದಲ್ಲಿ ರೈತರು

ಕೋಲಾರ: ಕಳೆದ ರಾತ್ರಿ ಜಿಲ್ಲೆಯ ಹಲವೆಡೆ ಸುರಿದ ಮಳೆಯಿಂದಾಗಿ ರೈತರು ಕಂಗಾಲಾಗಿದ್ದು, ಲಕ್ಷಾಂತರ ರೂಪಾಯಿ ಬೆಳೆ ಜಲಾವೃತಗೊಂಡಿದೆ. ಮಳೆ ನೀರು ಹೊಲಕ್ಕೆ ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನಾನಾ ಬೆಳೆಗಳು ಮುಳುಗಡೆಯಾಗಿವೆ.

ಭಾರೀ ಮಳೆಯಿಂದಾಗಿ ಕೋಲಾರ ತಾಲೂಕಿನ ನರಸಾಪುರ ಹಾಗೂ ವೇಮಗಲ್ ಸುತ್ತಮುತ್ತ ಬೆಳೆಗಳು ನಾಶವಾಗಿದ್ದು, ನೀರಿನಲ್ಲಿ ಕೊಚ್ಚಿ ಹೋಗಿವೆ. ಟೊಮ್ಯಾಟೋ ನೀರಿನಲ್ಲಿ ತೇಲಿ ಹೋದರೆ, ಪಂಪ್ ಸೆಟ್‍ಗಳು ಜಲಾವೃತಗೊಂಡಿವೆ, ಡ್ರಿಪ್ ಪೈಪ್‍ಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಇದನ್ನೂ ಓದಿ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ

ಭಾರೀ ಮಳೆಯಾದ ಪರಿಣಾಮ ಒತ್ತುರಿಯಾಗಿರುವ ರಾಜಕಾಲುವೆ ಹಾಗೂ ಹಳ್ಳಕೊಳ್ಳದ ನೀರು ನೇರವಾಗಿ ರೈತರ ತೋಟಗಳನ್ನ ಆವರಿಸಿದೆ. ಪರಿಣಾಮ ರೈತರು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳೆಲ್ಲ ಜಲಾವೃತಗೊಂಡಿವೆ. ಸಾಲ ಮಾಡಿ, ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದನ್ನೂ ಓದಿ: ನಂದಿಬೆಟ್ಟಕ್ಕೆ ಶಾಶ್ವತ ರಸ್ತೆ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ನಿಷೇಧ

ಕೊರೊನಾ ಸಂಕಷ್ಟದಿಂದ ಪಾರಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬೆಳೆ ಒಂದೇ ರಾತ್ರಿಗೆ ನೀರು ಪಾಲಾಗಿದೆ. ಮಳೆ ನೀರಿನೊಂದಿಗೆ ಕೆ.ಸಿ.ವ್ಯಾಲಿ ನೀರು ಸೇರಿದ ಪರಿಣಾಮ ನರಸಾಪುರ ಸುತ್ತಮುತ್ತ ಲಕ್ಷಾಂತರ ರೂಪಾಯಿ ಭತ್ತ, ರಾಗಿ, ಟೊಮ್ಯಾಟೋ ಬೆಳೆಗಳು ನೀರಿನಲ್ಲಿ ಮುಳುಗಿವೆ. ನೀರಿಲ್ಲದ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪ ನೀರಿನಲ್ಲೇ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ಒಳ್ಳೆಯ ಬೆಳೆ ಬೆಳೆದು ಜೀವನ ಮಾಡಬೇಕು ಎಂದುಕೊಂಡಿದ್ದ ರೈತನಿಗೆ ಮಳೆ ಸುನಾಮಿಯಂತೆ ಬಂದಪ್ಪಳಿಸಿದೆ.

ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸದ್ಯ ಹಾನಿಗೊಳಗಾದ ರೈತರ ತೋಟಗಳಿಗೆ ಬೇಟಿಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಬರಬೇಕು ಇಲ್ಲವಾದಲ್ಲಿ ರೈತರ ಪರಿಸ್ಥಿತಿ ಮತ್ತಷ್ಟು ದುಸ್ಥಿತಿ ತಲುಪಲಿದೆ. ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡ ಪರಿಣಾಮ ನೀರು ನುಗ್ಗಿದೆ, ಹಾಗಾಗಿ ಸಂಬಂದಪಟ್ಟವರು ಕಾಲುವೆ ಒತ್ತುವರಿ ತೆರವುಗೊಳಿಸಬೇಕು ಎಂದು ರೈತರ ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *