ಮುಂದಿನ 4 ದಿನ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ – ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಿರ್ದೇಶಕ ಸಿ.ಎಸ್. ಪಾಟೀಲ್ ಅವರು, ಇಂದು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ. ಉತ್ತರ ದಕ್ಷಿಣ ವಲಯಗಳ ಎಲ್ಲಾ ಭಾಗದಲ್ಲೂ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 18 ಸೆ.ಮಿ., ತಾಳಗುಪ್ಪ, ಶಿವಮೊಗ್ಗದಲ್ಲಿ 13 ಸೆ.ಮೀ.ಬೆಳಗಾವಿಯಲ್ಲಿ 11 ಸೆ.ಮೀ ಮಳೆಯಾಗಿದೆ. ಜಾರ್ಖಾಂಡ್ ಸುತ್ತಮುತ್ತ ವಾಯುಭಾರ ಕುಸಿತವಾಗಿದ್ದು, ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಕಡಿಮೆ ಒತ್ತಡ ವಿಸ್ತರಿಸಿರುವ ಪ್ರದೇಶಗಳಿವೆ. ಇದರಿಂದ ಕರಾವಳಿ ಭಾಗದಲ್ಲಿ ಜುಲೈ 24 ರಿಂದ 28 ರವರೆಗೆ ವ್ಯಾಪಕವಾಗಿ ಮಳೆಯಾಗಲಿದೆ.

ಉತ್ತರ, ದಕ್ಷಿಣ ಒಳನಾಡಿನಲ್ಲಿ 24 ರಂದು ಬಹುತೇಕ ಎಲ್ಲಾ ಕಡೆ ಮಳೆಯಾಗಲಿದೆ. ಜುಲೈ 25 ರಿಂದ 28ವರೆಗೆ ಕೆಲವು ಕಡೆ ಮಾತ್ರ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಬೆಳಗಾವಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ 24 ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. 25, 26 ರಂದು ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜುಲೈ 25 ರ ಬಳಿಕ ರಾಜ್ಯದಲ್ಲಿ ಮಳೆ ಪ್ರಮಾಣ ಕ್ಷೀಣಿಸುವ ಸಾಧ್ಯತೆ ಇದೆ. ಬೆಂಗಳೂರಿನಲ್ಲೂ ಮುಂದಿನ ಎರಡು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಂಟಿಗ್ರೇಡ್, ಕನಿಷ್ಠ 20 ಡಿಗ್ರಿ ಸೆಂಟಿಗ್ರೇಡ್ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ ಎರಡು ದಿನಗಳ ಕಾಲ ಕಡಿಮೆಯಾಗಿದ್ದ ಮಾನ್ಸೂನ್ ನಿರಂತರವಾಗಿ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಅಲ್ಲಲ್ಲಿ ಮಳೆ ಬೀಳುತ್ತಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಉಡುಪಿ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ. ಅರಬ್ಬಿ ಸಮುದ್ರದಲ್ಲಿ 60ರಿಂದ 70 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು ನದಿಯ ನೀರು ಸರಾಗವಾಗಿ ಸಮುದ್ರ ಸೇರಲು ಸಾಧ್ಯವಾಗುತ್ತಿಲ್ಲ.

ಯಾವುದೇ ಕಾರಣಕ್ಕೂ ನಾಡದೋಣಿ ಮೀನುಗಾರಿಕೆ ಬೋಟ್ ಗಳು ಸಮುದ್ರಕ್ಕೆ ಇಳಿಯಬಾರದು ಎಂದು ಖಡಕ್ ಸೂಚನೆ ನೀಡಲಾಗಿದೆ. ಇಷ್ಟಾದರೂ ಕೆಲ ಮೀನುಗಾರರು ಆತಂಕದ ವಾತಾವರಣದ ನಡುವೆ ಸಮುದ್ರಕ್ಕಿಳಿದು ಕಸುಬು ಮಾಡಿದ್ದಾರೆ. ಗಾಳಿ ಮಳೆಯ ನಡುವೆ ಮೀನುಗಾರಿಕಾ ವೃತ್ತಿ ಮಾಡುವ ಮೊಗವೀರರು ಆತಂಕವನ್ನು ತಂದುಕೊಳ್ಳಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಸಮುದ್ರದ ಪ್ರಕ್ಷುಬ್ಧತೆ ಜಾಸ್ತಿ ಇದ್ದು ಪ್ರವಾಸಿಗರು ಮಲ್ಪೆ ಮರವಂತೆ ಕಾಪು ಪಡುಬಿದ್ರೆಯಲ್ಲಿ ನೀರಿಗಿಳಿಯಬಾರದು ಸೂಚನೆಯನ್ನು ನೀಡಲಾ ಗಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದು, ಮಳೆ ಮುಂದುವರಿಯುವ ಸಾಧ್ಯತೆಯಿದೆ. ಮಳೆಯ ನಡುವೆ ಬಿಸಿಲಿನ ಕಣ್ಣಾಮುಚ್ಚಾಲೆ ನಡೆಯುತ್ತಿದೆ. ಇದನ್ನೂ ಓದಿ:ಉಡುಪಿಯಲ್ಲಿ ರೆಡ್ ಅಲರ್ಟ್- ಆತಂಕದ ನಡುವೆ ಸಮುದ್ರಕ್ಕಿಳಿದ ನಾಡದೋಣಿ ಮೀನುಗಾರರು

Comments

Leave a Reply

Your email address will not be published. Required fields are marked *