ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್

ಬೆಂಗಳೂರು: ಈಗಲೇ ದರ್ಶನ್ ಕ್ಷಮೆ ಕೇಳಿದರೆ ಒಳ್ಳೆಯವರಾಗುತ್ತೀರಿ. ಘಟನೆ ನಡೆದಿರುವ ಬಗ್ಗೆ ಕ್ಷಮೆ ಕೇಳಿ ನ್ಯಾಯ ಒದಗಿಸಿಕೊಡಿ ಎಂದು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸ್ ಆಫೀಸರ್ ಮುಂದೆ ಎಲ್ಲವನ್ನೂ ಹೇಳಲು ಸಿದ್ಧ. ನಾನು ವೈಯಕ್ತಿಕವಾಗಿ ಮುಂದೆ ಬಂದು ಮಾತನಾಡಿದ್ದೇನೆ. ಈ ಪ್ರಕರಣವನ್ನು ಮತ್ತಷ್ಟು ಮುಂದುವರಿಸುವುದು ಬೇಡ. ಮತ್ತೆ ಮುಂದುವರಿಸಿದರೆ ಇನ್ನು ಹೆಚ್ಚಿನ ತೇಜೋವಧೆಯಾಗಲಿದೆ. ಸಂದೇಶ್, ಸಂದೇಶ್ ನಾಗರಾಜ್ ಅವರಲ್ಲಿ ಕ್ಷಮೆ ಕೇಳಿದ್ರೆ ಏನ್ ಕಳ್ಕೋತ್ತೀರಾ ಎಂದು ದರ್ಶನ್ ಅವರನ್ನು ಇಂದ್ರಜಿತ್ ಪ್ರಶ್ನಿಸಿದ್ದಾರೆ.

ಮೇರು ನಟ ಹೇಗಿರಬೇಕು ಎಂಬುದನ್ನು ರಾಜ್ ಕುಮಾರ್ ನೋಡಿ ಕಲಿಯಬೇಕು. ನಿಮ್ಮ ಪ್ರತಿಯೊಂದು ಹೆಜ್ಜೆಯೂ ಮುಖ್ಯವಾಗುತ್ತದೆ. ಸಾಮಾನ್ಯರ ವೈಯಕ್ತಿಕ ಜೀವನ ಫೋಕಸ್ ಆಗುವುದಿಲ್ಲ. ನಿಮ್ಮ ಜೀವನ ಹೆಚ್ಚು ಫೋಕಸ್ ಆಗಲಿದೆ. ಹಾಗಾಗಿ ನಾನು ಮಾತನಾಡುತ್ತೀದ್ದೇನೆ ಎಂದು ತಿಳಿಸಿದರು.

ನನ್ನ ಟ್ರ್ಯಾಕ್ ರೆಕಾರ್ಡ್ ನೋಡಿದ್ದೀರಾ? ನನ್ನ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಸಮಾಜದ ಕಾಳಜಿಯಿಂದ ಮಾತನಾಡುತ್ತಿದ್ದೇನೆ. ಸಾಮಾನ್ಯ ಸಪ್ಲೈಯರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಕೊಡಿಸಲು ಮುಂದೆ ಬಂದಿದ್ದೇನೆ ಎಂದರು. ಇದನ್ನೂ ಓದಿ: ನಾನು ದಲಿತ ಅಲ್ಲ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು: ಗಂಗಾಧರ್

ಇದು ಜಾತಿ ವಿಷಯ ಅಲ್ಲ. ಶೋಷಿತನಿಗೆ ಅನ್ಯಾಯವಾಗಿದೆ. ಆಡಿಯೋದಲ್ಲಿ ಹೋಟೆಲ್ ಮಾಲೀಕ ತಪ್ಪೊಪ್ಪಿಕೊಂಡಿದ್ದಾರೆ. ಅವರು ವಿಸ್ತಾರವಾಗಿ ಮಾತಾಡಿದ್ದು, ಆಡಿಯೋದಲ್ಲಿ ಇರುವ ಧ್ವನಿ ನನ್ನದೆ. ಸಂದೇಶ್ ಜೊತೆ ಮಾತನಾಡಿದ್ದು ನಾನೇ. ಕೇವಲ ಅವರೊಬ್ಬರ ಜೊತೆಯಲ್ಲ ಅಲ್ಲಿನ ಸಿಬ್ಬಂದಿ ಜೊತೆಯೂ ಸಹ ಮಾತನಾಡಿದ್ದೇನೆ ಎಂದು ಹೇಳಿದರು.

ಮೈಸೂರಿನ ಮಾಧ್ಯಮದ ಮೂಲಕ ಹಲವು ವಿಚಾರದಲ್ಲಿ ನೊಂದವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನ್ಯಾಯಲಯದ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ದರ್ಶನ್‍ನಿಂದ ಯಾವುದೇ ಕಾಲ್ ಬಂದಿಲ್ಲ. ಯಾರಿಂದಲೂ ಬೆದರಿಕೆ ಕರೆ ಬಂದಿಲ್ಲ. ರಾಜಿ ಸಂಬಂಧ ಯಾವುದೋ ಕಾಲ್ ಬಂದಿತ್ತು ಎಂದು ತಿಳಿಸಿದರು.

ಕುಮಾರಸ್ವಾಮಿ ಜೊತೆಗೆ ಇದ್ದ ಫೋಟೋದ ಬಗ್ಗೆ ಪ್ರತಿಕ್ರಿಯಿಸಿ, ಹಲವಾರು ಬಾರಿ ನಾನು ಕುಮಾರಸ್ವಾಮಿ ಜೊತೆ ಭೇಟಿ ಮಾಡಿದ್ದೇನೆ. ಆ ಫೋಟೋ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆಯ ಫೋಟೋ ಎಂದು ಸ್ಪಷ್ಟನೆ ನೀಡಿದರು.

ಹಿರಿಯ ವಕೀಲ ಶ್ಯಾಮ್ ಸುಂದರ್ ಮಾತನಾಡಿ, ಯಾವುದೇ ದಾಖಲೆಗಳನ್ನು ಮಾಧ್ಯಮಗಳಿಗೆ ಕೊಡಬೇಡಿ. ಕೇವಲ ತನಿಖೆಗೆ ಮಾತ್ರ ನೀಡಿ ಅಂತ ನಾನೇ ಇಂದ್ರಜಿತ್ ಲಂಕೇಶ್ ಅವರಿಗೆ ಹೇಳಿದ್ದೆ. ತನಿಖೆ ವೇಳೆ ಪೊಲೀಸರು ಸಹ ಸ್ಟೇಟ್ಮೆಂಟ್ ಕೊಡಬಾರದು. ಸಾಕ್ಷ್ಯಧಾರಗಳಿರುವಂತದ್ದನ್ನು ಮಾಧ್ಯಮಗಳಿಗೆ ಕೊಡದಂತೆ ಹೇಳಿದ್ದೇನೆ ಎಂದರು.

Comments

Leave a Reply

Your email address will not be published. Required fields are marked *