ನೀವೆಲ್ಲಾ ಸೇರಿದ್ದೀರಿ, ನಿಮ್ಮ ಜಾತಿಯನ್ನು ನಾವು ಕೇಳ್ತೀವಾ – ಇಂದ್ರಜಿತ್‍ಗೆ ದರ್ಶನ್ ತಿರುಗೇಟು

– ದಲಿತ ವೇಟರ್ ಮೇಲೆ ಹಲ್ಲೆ ಆರೋಪ
– ಇಂದ್ರಜಿತ್ ದೊಡ್ಡ ತನಿಖಾಧಿಕಾರಿ

ಬೆಂಗಳೂರು: ನೀವೆಲ್ಲಾ ಇಲ್ಲಿ ಸೇರಿದ್ದೀರಿ. ನಿಮ್ಮ ಜಾತಿ ಯಾವುದು ಅಂತ ಕೇಳ್ತೀವಾ?. ಹೋಟೆಲ್‍ನಲ್ಲಿ ಸಪ್ಲೈಯರ್ ಊಟ ತಡವಾಗಿ ತಂದಿದ್ದಕ್ಕೆ ಬೈದಿರಬಹುದು. ಯಾಕಪ್ಪ ತಡ ಮಾಡಲಾಗಿದೆ ಎಂದು ಕೇಳಿರಬಹುದು. ಆದರೆ ಈಗ ಈ ಪ್ರಕರಣದಲ್ಲಿ ಜಾತಿ ತೆಗೆದಿದ್ದಾರೆ ಎಂದು ಹೇಳುವ ಮೂಲಕ ದರ್ಶನ್ ಇಂದ್ರಜಿತ್ ಲಂಕೇಶ್‍ಗೆ ತಿರುಗೇಟು ನೀಡಿದ್ದಾರೆ.

ಇಂದು ಬೆಳಗ್ಗೆ ಗೃಹ ಸಚಿವ ಬೊಮ್ಮಾಯಿ ಅವರಿಗೆ ದೂರು ನೀಡಿದ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಮೇಲೆ ಗಂಭೀರ ಆರೋಪ ಮಾಡಿದ್ದರು. ಈ ಆರೋಪಗಳಿಗೆ ದರ್ಶನ್ ಮಾಧ್ಯಮಗಳಿಗೆ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ : ದಲಿತ ವೇಟರ್ ಮೇಲೆ ದರ್ಶನ್, ಸ್ನೇಹಿತರಿಂದ ಹಲ್ಲೆ – ಇಂದ್ರಜಿತ್ ಆರೋಪ

ಇಂದ್ರಜಿತ್ ದೊಡ್ಡ ಇನ್ವೆಸ್ಟಿಗೇಟರ್. ಅವರು ತನಿಖೆ ಮಾಡಲಿ. ಪೊಲೀಸರು ತನಿಖೆ ಮಾಡಿದ ಬಳಿಕ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ದರ್ಶನ್ ಹೇಳಿದ್ದು ಏನು?
ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದಾರೆ. ನಾವು ರಾಜಿ ಮಾಡಿ ಪ್ರಕರಣವನ್ನು ಮುಗಿಸಿಲ್ಲ. ಈಗಾಗಲೇ ಎಫ್‍ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆಯ ಬಳಿಕ ನಾನು ಎಲ್ಲವನ್ನೂ ಮಾತನಾಡುತ್ತೇನೆ.

ಇಂದ್ರಜಿತ್ ಲಂಕೇಶ್ ಏನ್ ಬೇಕಾದರೂ ಹೇಳಲಿ. ಊಹಾಪೋಹಗಳನ್ನು ಬಿಟ್ಟು ಬಿಡಿ. ಇದನ್ನು ಮುಚ್ಚಿ ಹಾಕ್ತಿಲ್ಲ. ಈಗ ಇದರಲ್ಲಿ ಜಾತಿ ಬೇರೆ ತರುತ್ತಿದ್ದಾರೆ. ಇವತ್ತು ಯಾಕೆ ಈ ಪ್ರಶ್ನೆ ಹುಟ್ಟಿಕೊಂಡಿತು?

ನನ್ನದು ಸಂದೇಶ್ ಮಧ್ಯೆ ಸಾವಿರ ಗಲಾಟೆ ಇದೆ. ಇಂದ್ರಜಿತ್ ಅವ್ರು ದೊಡ್ಡ ತನಿಖಾದಾರರು. ನಾಲ್ಕು ದಿನದ ಲೆಕ್ಕ ತೆಗೆದುಕೊಳ್ಳಲಿ. ಇಂದ್ರಜಿತ್ ಹೇಳಿದ್ದನ್ನು ಸಾಬೀತು ಪಡಿಸಲಿ. ನಾಳೆ ಆಷಾಢ ಶುಕ್ರವಾರ ಇರುವ ಕಾರಣ ಈಗ ಮೈಸೂರಿಗೆ ಹೋಗುತ್ತಿದ್ದೇನೆ. ಅಲ್ಲಿ ಬಂದು ಕೇಳಿದರೂ ಇದೇ ಉತ್ತರವನ್ನು ನೀಡುತ್ತೇನೆ.

Comments

Leave a Reply

Your email address will not be published. Required fields are marked *