ಜನ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡಿಕೊಳ್ಳದಿರುವುದು ಆತಂಕಕ್ಕೆ ಕಾರಣ: ಮೋದಿ

ನವದೆಹಲಿ: ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡಿಕೊಳ್ಳದೆ ಜನ ಸಂದಣಿಯಲ್ಲಿ ಭಾಗಿಯಾಗುತ್ತಿರುವ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದ್ದು, ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ನಾವೆಲ್ಲರು ಒಟ್ಟಾಗಿ ಮೂರನೇ ಅಲೆ ಬಾರದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ 8 ರಾಜ್ಯಗಳ ಸಿಎಂಗಳ ಜೊತೆಗೆ ಮಹತ್ವದ ಸಭೆ ನಡೆಸಿದರು. ಅರುಣಾಚಲ ಪ್ರದೇಶ, ತ್ರಿಪುರ, ಅಸ್ಸಾಂ, ಮಣಿಪುರ, ಮೇಘಾಲಯ, ನಾಗಲ್ಯಾಂಡ್, ಮಿಜೋರಾಂ, ಸಿಕ್ಕಿಂ ಸಿಎಂಗಳ ಜೊತೆಗೆ ಚರ್ಚೆ ನಡೆಸಿದ ಮೋದಿ, ವೇಗವಾಗಿ ಕೊರೊನಾ ನಿಯಂತ್ರಣ ಮಾಡುವಂತೆ ಸೂಚಿಸಿದ್ದಾರೆ.

ದೇಶದ 58 ಜಿಲ್ಲೆಗಳಲ್ಲಿ ಶೇ.10 ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಪೈಕಿ 37 ಜಿಲ್ಲೆಗಳು ಈಶಾನ್ಯ ರಾಜ್ಯಗಳಿಗೆ ಸೇರಿದ್ದು, ಈಶಾನ್ಯ ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಸದ್ಯದ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಿಳೆಗೆ ಪ್ಯಾಂಟ್ ಬಿಚ್ಚಿ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಶೀಲ್ದಾರ್

ವೈರಸ್ ಹರಡುವ ವಿಚಾರದಲ್ಲಿ ಜಾಗರೂಕರಾಗಿರಬೇಕು, ವೇಗವಾಗಿ ಕಾರ್ಯ ನಿರ್ವಹಿಸಿ ನಿಯಂತ್ರಣಕ್ಕೆ ಮಾಡಬೇಕಿದೆ. ಸೋಂಕು ಹೆಚ್ಚು ಹರಡುತ್ತಿರುವ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್ ಹೆಚ್ಚು ಮಾಡಬೇಕಿದ್ದು, ಮೈಕ್ರೊ ಲೆವಲ್ ಕಂಟೈನ್ಮೆಂಟ್ ಝೋನ್ ಗಳ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮವಹಿಸಬೇಕು. ಮೂರನೇ ಅಲೆ ತಡೆಯಲು ವ್ಯಾಕ್ಸಿನೇಷನ್ ವೇಗ ನೀಡಬೇಕು ಎಂದು ಅವರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *