ವ್ಯಾಕ್ಸಿನ್‍ಗಾಗಿ ನೂಕು ನುಗ್ಗಲು- ಅಂತರ ಕಾಯ್ದುಕೊಳ್ಳದೆ ಆತಂಕ ಸೃಷ್ಟಿಸಿದ ಜನ

ಮಡಿಕೇರಿ: ಕೋವಿಡ್ ವ್ಯಾಕ್ಸಿನ್ ಪಡೆಯಲು ಜಿಲ್ಲೆಯ ಜನ ಸಮರೋಪಾದಿಯಲ್ಲಿ ಆಗಮಿಸುತ್ತಿದ್ದು, ಲಸಿಕಾ ಕೇಂದ್ರದ ಬಳಿ ಜನಜಂಗುಳಿ ಉಂಟಾಗುತ್ತಿದೆ.

ಇಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ವ್ಯಾಕ್ಸಿನ್ ಗಾಗಿ ನೂಕು ನುಗ್ಗಲು ಉಂಟಾಗಿದೆ. ಅಂತರ ಕಾಯ್ದುಕೊಳ್ಳದೆ ಜನ ಸೋಂಕು ವ್ಯಾಪಿಸುವ ಆತಂಕ ಸೃಷ್ಟಿಸಿದರು. ಜನರನ್ನು ನಿಯಂತ್ರಿಸಲು ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಹರಸಾಹಸಪಡುವಂತಾಯಿತು. ಕೆಲವರು ಬೆಳಗ್ಗೆ 7.30ಕ್ಕೆ ಲಸಿಕೆ ನೀಡುವ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎದುರು ಸಾಲುಗಟ್ಟಿ ನಿಂತಿದ್ದರು. ಇದನ್ನೂ ಓದಿ: ಅನ್‍ಲಾಕ್ ಬಳಿಕ ಸಹಜ ಸ್ಥಿತಿಯತ್ತ ಸಾರಿಗೆ

ಇಂದು ಎರಡನೇ ಡೋಸ್ ಲಸಿಕೆ ಮಾತ್ರ ನೀಡಲಾಗುವುದು ಎಂದು ವೈದ್ಯರು ತಿಳಿಸಿದ ನಂತರ ಹಲವರು ನಿರಾಶೆಯಿಂದ ಮರಳಿದರು. ಅಲ್ಪ ಪ್ರಮಾಣದ ವ್ಯಾಕ್ಸಿನ್ ಬಂದಿದೆ ಎನ್ನುವ ವಿಚಾರ ತಿಳಿದು ಜನಜಂಗುಳಿ ಉಂಟಾಯಿತು ಎಂದು ಹೇಳಲಾಗಿದೆ. ವ್ಯಾಕ್ಸಿನ್ ವಿತರಣೆ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುತ್ತಿಲ್ಲವೆಂದು ಸ್ಥಳೀಯರು ದೂರಿಕೊಂಡಿದ್ದಾರೆ. ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲಸಿಕೆ ನೀಡಲಾಗುತ್ತಿದೆ. ಆದರೆ ಇದನ್ನು ಪಡೆಯಲು ಬರುತ್ತಿರುವವರು ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಿ ನೂಕು ನುಗ್ಗಲು ಉಂಟು ಮಾಡುತ್ತಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಲಸಿಕೆ ಪಡೆಯಲು ಬಂದವರು ರಸ್ತೆಯುದ್ದಕ್ಕೂ ಎರಡೂ ಬದಿ ವಾಹನಗಳನ್ನು ನಿಲ್ಲಿಸಿದ್ದರಿಂದ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಸಹ ಉಂಟಾಯಿತು.

Comments

Leave a Reply

Your email address will not be published. Required fields are marked *