ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು: ಸುಧಾಕರ್ ಕಿಡಿ

ಬೆಂಗಳೂರು: ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ಅಂತ ಕಾಂಗ್ರೆಸ್ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಆಕ್ರೋಶ ಹೊರ ಹಾಕಿದ್ದಾರೆ. ಲಸಿಕೆ ಕೊರತೆ ಬಗ್ಗೆ ಆರೋಗ್ಯ ಸಚಿವರು ಸುಳ್ಳು ಹೇಳ್ತಿದ್ದಾರೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಕಾಂಗ್ರೆಸ್ ಮೊದಲಿನಿಂದಲೂ ರಾಜಕೀಯ ಮಾಡ್ತಾ ಇದೆ. ಈಗ ಲಸಿಕೆ ವಿಚಾರದಲ್ಲೂ ಇದನ್ನೆ ಮಾಡುತ್ತಿದೆ ಅಂತ ಕಿಡಿಕಾರಿದರು.

ರಾಜ್ಯದಲ್ಲಿ ಈವರೆಗೂ 2 ಕೋಟಿ 28 ಲಕ್ಷ ಲಸಿಕೆ ನೀಡಲಾಗಿದೆ. ಲಸಿಕೆ ಕೊರತೆ ಇದ್ದರೆ ಇಷ್ಟು ಲಸಿಕೆ ಕೊಡಲು ಆಗುತ್ತಿತ್ತಾ? ಇದರಲ್ಲಿ ನಾವು ಸುಳ್ಳು ಹೇಳೋಕೆ ಆಗುತ್ತಾ? ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ ನವರು ಮೊದಲಿನಿಂದಲೂ ಅನಗತ್ಯ ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡ್ತಿದ್ದಾರೆ. ಕಾಂಗ್ರೆಸ್ ಅವರು ಲಸಿಕೆಯಲ್ಲಿ ರಾಜಕೀಯ ಮಾಡಬಾರದು ಅಂತ ತಿರುಗೇಟು ಕೊಟ್ರು. ಇದನ್ನೂ ಓದಿ: ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್​​​ಗೆ ಇರಿಸು ಮುರಿಸು

ಒಂದೆರೆಡು ದಿನ ರಾಜ್ಯಕ್ಕೆ ಕಡಿಮೆ ಲಸಿಕೆ ಬಂದಿರಬಹುದು. ಆದ್ರೆ ಲಸಿಕೆ ಇಲ್ಲ ಅಂತ ಹೇಳೋದು ಸರಿಯಲ್ಲ. ವಿಶ್ವದಲ್ಲಿ ಅತಿ ಹೆಚ್ಚು ಲಸಿಕೆ ಕೊಟ್ಟಿರೋದು ಭಾರತ ದೇಶ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು. ನಾನು ಸೋಮವಾರ ದೆಹಲಿಗೆ ತೆರಳುತ್ತಿದ್ದೇನೆ. ಲಸಿಕೆ ಹೆಚ್ಚಳ ಮಾಡಲು ಕೇಂದ್ರಕ್ಕೆ ಮನವಿ ಮಾಡ್ತೀವಿ ಅಂತ ಇದೇ ವೇಳೆ ಸಚಿವರು ತಿಳಿಸಿದರು.

Comments

Leave a Reply

Your email address will not be published. Required fields are marked *