ವೀಕೆಂಡ್ ಕರ್ಫ್ಯೂ ಅನಗತ್ಯ ಓಡಾಟ – ಮಧ್ಯರಾತ್ರಿ ಓಡಾಡಿದವರಿಗೆ ವ್ಯಾಯಾಮ ಶಿಕ್ಷೆ

ಶಿವಮೊಗ್ಗ: ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಇದರ ನಡುವೆಯೂ  ಕರ್ಫ್ಯೂ ಉಲ್ಲಂಘಿಸಿ ಶನಿವಾರ ರಾತ್ರಿ ವೇಳೆ ಶಿವಮೊಗ್ಗದ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಹಲವು ಮಂದಿ ಅನಗತ್ಯವಾಗಿ ಓಡಾಡುತ್ತಿದ್ದರು. ಅಂತವರನ್ನು ಠಾಣೆಗೆ ಕರೆತಂದು ಪೊಲೀಸರು ವ್ಯಾಯಾಮ ಮಾಡುವ ಶಿಕ್ಷೆ ನೀಡಿದ್ದಾರೆ.

ವೀಕೆಂಡ್ ಕರ್ಫ್ಯೂ ವೇಳೆ ಅನಗತ್ಯವಾಗಿ ಮನೆಯಿಂದ ಹೊರಗೆ ಓಡಾಡಬೇಡಿ ಎಂದು ಸರ್ಕಾರ, ಪೊಲೀಸರು ಸಾರ್ವಜನಿಕರಲ್ಲಿ ಅದೆಷ್ಟೋ ಬಾರಿ ಮನವಿ ಮಾಡಿದ್ದಾರೆ. ಆದರೂ ಜನ ಕ್ಯಾರೆ ಎನ್ನದೆ ಮನೆಯಿಂದ ಹೊರಬರುತ್ತಿದ್ದಾರೆ. ಶಿವಮೊಗ್ಗದಲ್ಲಿ ಕಳೆದ ರಾತ್ರಿ 10 ಗಂಟೆಯ ನಂತರವೂ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರು ಹಾಗೂ ನೂರಕ್ಕೂ ಹೆಚ್ಚು ಜನರನ್ನು ಕೋಟೆ ಪೋಲಿಸ್ ಠಾಣೆಯ ಸಿಪಿಐ ಚಂದ್ರಶೇಖರ್ ನೇತೃತ್ವದಲ್ಲಿ ಠಾಣೆಗೆ ಕರೆತಂದು ವ್ಯಾಯಾಮ ಮಾಡಿಸಿದ್ದಾರೆ. ಇದನ್ನೂ ಓದಿ: ವರದಾ ನದಿಯಲ್ಲಿ ಮುಳುಗಿ ಯುವಕ ಸಾವು

ನೂರಾರು ಜನರು ಅಂಗಡಿಗಳ ಮುಂದೆ ನಿಂತುಕೊಂಡು ಹರಟೆ ಹೊಡೆಯುತ್ತಿದ್ದ ಹಾಗೂ ಅನಗತ್ಯವಾಗಿ ಓಡಾಡುತ್ತಿದ್ದವರನ್ನು ಡಿಎಆರ್ ಪೊಲೀಸ್‍ನ ವಿಶೇಷ ತಂಡದೊಂದಿಗೆ ಬಸ್‍ನಲ್ಲಿ ಠಾಣೆಗೆ ಕರೆತಂದು ವ್ಯಾಯಾಮ ಮಾಡುವ ಶಿಕ್ಷೆ ನೀಡಿದ್ದಾರೆ. ಬಳಿಕ ಇನ್ನೊಮ್ಮೆ ಯಾರಾದರೂ ಅನಗತ್ಯವಾಗಿ ಮನೆಯಿಂದ ರಾತ್ರಿ ಹೊರ ಬಂದು ಸುತ್ತಾಡಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ಸಿಪಿಐ ಚಂದ್ರಶೇಖರ್ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.

Comments

Leave a Reply

Your email address will not be published. Required fields are marked *