ನಿರಾಶ್ರಿತ ಮಹಿಳೆಗೆ ಕೋವಿಡ್ ಪಾಸಿಟಿವ್- ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸರು, ವೈದ್ಯರು

ಚಾಮರಾಜನಗರ: ಕೋವಿಡ್ ಪಾಸಿಟಿವ್ ಆಗಿದ್ದ ನಿರಾಶ್ರಿತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವ ಮೂಲಕ ನಗರದ ಪೊಲೀಸರು ಹಾಗೂ ವೈದ್ಯರು ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಬಲಚವಾಡಿಯಲ್ಲಿ 70 ವರ್ಷದ ವೃದ್ಧೆ ನಿತ್ರಾಣಗೊಂಡು ಬಿದ್ದಿದ್ದರು. ತೆರಕಣಾಂಬಿ ಪೊಲೀಸರು ತಕ್ಷಣವೇ ಕಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಈ ವೇಳೆ ವೃದ್ಧೆಗೆ ಕೊರೊನಾ ಪಾಸಿಟಿವ್ ಆಗಿರುವುದು ತಿಳಿದಿದೆ. ಬಳಿಕ ವೃದ್ಧೆಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದರು. ವೃದ್ಧೆಗೆ ವೈದ್ಯರು 14 ದಿನಗಳ ಕಾಲ ಚಿಕಿತ್ಸೆ ನೀಡಿದ್ದು, ಇದೀಗ ವೃದ್ಧೆಗೆ ಕೋವಿಡ್ ನೆಗೆಟಿವ್ ಬಂದಿದೆ. ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ವೃದ್ಧೆ ಮತ್ತೆ ನಿತ್ರಾಣಗೊಂಡಿದ್ದರು. ವಾರಸುದಾರರು ಇಲ್ಲದ ಕಾರಣ ಜಿಲ್ಲಾಸ್ಪತ್ರೆ ವೈದ್ಯರು ವೃದ್ಧೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರಿಸಿದ್ದಾರೆ.

ನಿತ್ರಾಣಗೊಂಡಿರುವ ವೃದ್ದೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೃದ್ಧೆ ಸಂಪೂರ್ಣ ಗುಣಮುಖರಾಗುವವರೆಗೂ ಚಿಕಿತ್ಸೆ, ಊಟೋಪಚಾರ ನೀಡಲು ವೈದ್ಯರು ನಿರ್ಧರಿಸಿದ್ದು, ಬಳಿಕ ವೃದ್ಧಾಶ್ರಮ ಇಲ್ಲವೇ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಕೊಡಿಸಲು ಕ್ರಮ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *