ನಾಯಕತ್ವ ಬದಲಾವಣೆ ನೂರಕ್ಕೆ ನೂರು ಸುಳ್ಳು: ಈಶ್ವರಪ್ಪ

ಬೆಂಗಳೂರು: ನಾಯಕತ್ವ ಬದಲಾವಣೆ ಅನ್ನೋದು ನೂರಕ್ಕೆ ನೂರು ಸುಳ್ಳು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕರ್ನಾಟಕದ ಭಾರತೀಯ ಜನತಾ ಪಾರ್ಟಿಯಲ್ಲಿ ಶಾಸಕರು ಸಚಿವರ ನಡುವೆ ಸ್ವಲ್ಪ ಗೊಂದಲ ಇರುವುದು ನಿಜ. ಅದರ ಬಗ್ಗೆ ಮಾತುಕತೆ ನಡೆಸಿ ಗೊಂದಲ ನಿವಾರಣೆ ಮಾಡಲು ಅರುಣ್ ಸಿಂಗ್ ಬರುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯೇ ಪ್ರಮುಖ ಅಂಶ ಅನ್ನೋದು ಸುಳ್ಳು ಎಂದರು.

ಭಾರತಿಯ ಜನತಾ ಪಾರ್ಟಿಯಲ್ಲಿ ಮಾತ್ರ ಈ ರೀತಿ ನಾಲ್ಕು ಗೋಡೆಯ ಮಧ್ಯದಲ್ಲಿ ಮಾತನಾಡುವ ಅವಕಾಶ ಇರುವುದು. ಜಮೀರ್, ಸಿದ್ದರಾಮಯ್ಯ ಚಾಮರಾಜಪೇಟೆಗೆ ಬರ್ತಾರೆ, ಮುಂದೆ ಸಿಎಂ ಆಗ್ತಾರೆ ಅಂತಾರೆ. ಅವರೆ ಬಿಫಾರಂ ಕೊಡುವುದಾ…? ಅವರೆ ಸಿಎಂ ಮಾಡುವುದಾ..? ಹೈಕಮಾಂಡ್ ಇಲ್ವಾ, ಕೆಪಿಸಿಸಿ ಅಧ್ಯಕ್ಷರು ಇಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯಡಿಯೂರಪ್ಪ ಸಮರ್ಥ ನಾಯಕ, ಅವರನ್ನೇ ಮುಂದುವರಿಸಿ – ವೀರಶೈವ ಲಿಂಗಾಯತ ಯುವ ವೇದಿಕೆ

ರೇಣುಕಾಚಾರ್ಯ, ಯೋಗೇಶ್ವರ್, ಸುನೀಲ್ ಕುಮಾರ್ ಎಲ್ಲರು ಮಾತನಾಡಿದಾರೆ ಹೌದು. ಅವರಿಗೆ ಮಾತನಾಡಬೇಡಿ ಅಂತ ನಾನು ಹೇಳಿದ್ದೇನೆ. ಆ ಕಾರಣಕ್ಕೆ ಅರುಣ್ ಸಿಂಗ್ ಬರುತ್ತಿದ್ದಾರೆ. ಎಲ್ಲಾ ಗೊಂದಲ ಪರಿಹಾರವಾಗುತ್ತೆ. ಭಾರತೀಯ ಜನತಾ ಪಾರ್ಟಿಯ ಈ ವ್ಯವಸ್ಥೆ ಕಾಂಗ್ರೆಸ್ಸಿನಲ್ಲಿ ಇಲ್ಲಾ. 17 ಜನ ಬಂದಿದ್ದರಿಂದಲೇ ನಮಗೆ ಸರ್ಕಾರ ಬಂದಿದೆ. ಪೂರ್ಣ ಬಹುಮತ ಬಂದಿದ್ದರೆ ಈ ರೀತಿ ಸಮಸ್ಯೆ ಇರುತ್ತಿರಲಿಲ್ಲ ಅನ್ನೋದು ನನ್ನ ಅಭಿಪ್ರಾಯ. ನೀವು ಏನು ಬೇಕಾದರು ತಿಳಿದುಕೊಳ್ಳಿ. ಕೇಂದ್ರದ ನಾಯಕರು ಏನು ಹೇಳ್ತಾರೋ ಅದನ್ನ ಶಿರಸ್ಸಾವಹಿಸಿ ಪಾಲಿಸುತ್ತೇನೆ. ನಮ್ಮ ನಾಯಕರ ತೀರ್ಮಾನವನ್ನ ರಾಜ್ಯದ ಎಲ್ಲರು ಪಾಲಿಸಲೇಬೇಕು ಎಂದು ಈಶ್ವರಪ್ಪ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *