ಒಂದೇ ಗಂಟೆಗೆ ಒಂದುಕಾಲು ಇಂಚು ಮಳೆ – ಮಲೆನಾಡಿಗರಿಗೆ ಸಂತೋಷದ ಜೊತೆ ಆತಂಕ

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೆಲ ಭಾಗದಲ್ಲಿ ಮಳೆರಾಯ ಅಪ್ಪರಿಸಿ ಬೊಬ್ಬಿರಿದಿದ್ದಾನೆ. ಮಳೆ ಕಂಡು ಮಲೆನಾಡಿಗರಿಗೆ ಒಂದೆಡೆ ಖುಷಿ, ಮತ್ತೊಂದೆಡೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಕೊಪ್ಪ ತಾಲೂಕಿನ ಜಯಪುರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಮಳೆಯ ಅಬ್ಬರ ಎಷ್ಟು ಜೋರಾಗಿತ್ತು ಎಂದರೆ, ಸುಮಾರು ಒಂದು ಗಂಟೆಗೆ ಒಂದೂಕಾಲು ಇಂಚಿನಷ್ಟು ಮಳೆ ಸುರಿದಿದೆ. ಮಳೆಯ ಅಬ್ಬರ ಕಂಡು ಜಯಪುರ ಸುತ್ತಮುತ್ತಲ್ಲಿನ ಜನ ಆತಂಕಕ್ಕೀಡಾಗಿದ್ದರು. ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಸಂಜೆ 5.30ರ ತನಕವೂ ಒಂದೇ ಸಮನೆ ಸುರಿದಿದೆ. ಭಾರೀ ಮಳೆಗಾಳಿಗೆ ರಸ್ತೆ ಬದಿಯ ಮರದ ಟೊಂಗೆಗಳು ಮುರಿದು ಬಿದ್ದಿವೆ. ಜಯಪುರ ಸುತ್ತಮುತ್ತಲಿನ ಕೆಲ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.

ಇನ್ನೂ ಮಲೆನಾಡು ಭಾಗಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರದಲ್ಲೂ ಮೋಡಕವಿದ ವಾತಾವರಣವಿದ್ದು ಅಲ್ಲಲ್ಲೆ ಸಾಧಾರಣ ಮಳೆ ಸುರಿದಿದೆ. ಬಿಸಿಲಿನ ಝಳಕ್ಕೆ ಬೇಸತ್ತಿದ್ದ ಮಲೆನಾಡಿಗರಿಗೆ ವರುಣದೇವ ತಂಪೆರೆದಿದ್ದಾನೆ. ಕಳೆದೊಂದು ವಾರದಿಂದಲೂ ಮಲೆನಾಡಲ್ಲಿ ಮೋಡಕವಿಯುತ್ತಿದ್ದು ಅಷ್ಟಾಗಿ ಮಳೆಯಾಗಿರಲಿಲ್ಲ. ಇಂದು ಜಯಪುರದಲ್ಲಿ ಸುರಿದ ಮಳೆ ಕಂಡು ಮಲೆನಾಡಿಗರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಇನ್ನೇನು ಮಲೆನಾಡಲ್ಲಿ ನಾಳೆ-ನಾಡಿದ್ದು ಎನ್ನುವಷ್ಟರಲ್ಲಿ ಮಳೆಗಾಲದ ಆರಂಭವಾಗಲಿದೆ.

ಮಳೆಗಾಲದ ಆರಂಭದ ಮೊದಲ ಮಳೆಯೇ ಈ ಪ್ರಮಾಣದಲ್ಲಿ ಸುರಿದಿದೆ ಅಂದರೆ, ಈ ಬಾರಿಯ ಮಳೆಗಾಲ ಹೇಗಿರಬಹುದು ಎಂದು ಜನ ಈಗಲೇ ಚಿಂತಾಕ್ರಾಂತರಾಗಿದ್ದಾರೆ. ಯಾಕಂದರೆ ಕಾಫಿನಾಡಲ್ಲಿ ಕಳೆದ ಎರಡ್ಮೂರು ವರ್ಷಗಳ ಮಳೆ ಮಲೆನಾಡಿಗರಿಗೆ ಮಳೆ ಎಂದರೆ ಭಯಪಡುವಂತಹಾ ಸ್ಥಿತಿ ನಿರ್ಮಿಸಿತ್ತು.

Comments

Leave a Reply

Your email address will not be published. Required fields are marked *