ಸೈಕಲ್‍ನಲ್ಲಿ ಮೈಕ್ ಕಟ್ಟಿ ಕೊರೊನಾ ಜಾಗೃತಿ – ವಿಶೇಷ ಚೇತನ ವಿದ್ಯಾರ್ಥಿಯ ಕಾಳಜಿಗೆ ಗ್ರಾಮಸ್ಥರ ಮೆಚ್ಚುಗೆ

ಮಡಿಕೇರಿ: ವಿಶೇಷ ಚೇತನ ವಿದ್ಯಾರ್ಥಿಯೋರ್ವ ತನ್ನ ಸೈಕಲ್‍ನಲ್ಲಿ ಮೈಕ್ ಕಟ್ಟಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳುವ ಮೂಲಕ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾನೆ.

ಕೊಡಗಿನ ಕರಡಿಗೋಡು ಗ್ರಾಮದ ಮಂಜುನಾಥ್ ಪಾಲಿಬೆಟ್ಟದ ಚೆಶೈರ್ ಹೋಮ್ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದು, ಕೊಡಗು ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿನ ಬಸ್ ನಿಲ್ದಾಣ ಹಾಗೂ ಸಿದ್ದಾಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ವಿಶೇಷ ಚೇತನ ವಿದ್ಯಾರ್ಥಿ ಜನರಿಗೆ ಕೊರೊನಾ ಬಗ್ಗೆ ಎಚ್ಚರಿಸುತ್ತಿದ್ದಾನೆ.

ಮಂಜುನಾಥನ ಕಾಳಜಿಗೆ ಗ್ರಾಮದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹಿಂದಿನಿಂದಲೂ ಸೈಕಲ್‍ನಲ್ಲಿ ಸುತ್ತಾಡುತ್ತಿರುವ ಮಂಜುನಾಥ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದಂತೆ ಪರಿಸರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದ. ಇದೀಗ ಕೊರೊನಾ ಮಹಾಮಾರಿ ವೈರಸ್‍ನಿಂದ ಜಿಲ್ಲೆಯಲ್ಲಿ ಹಲವು ಸಾವು ನೋವುಗಳು ಸಂಭವಿಸುತ್ತಿರುವುದನ್ನು ಟಿವಿ ಹಾಗೂ ಪತ್ರಿಕೆ ಮೂಲಕ ಕಂಡು ತನ್ನ ಸೈಕಲ್‍ನಲ್ಲಿ ಗ್ರಾಮದ ಸುತ್ತಲೂ ಸಾರ್ವಜನಿಕರು ಮಾಸ್ಕ್ ಧರಿಸದೇ ಓಡಾಡುತ್ತಿರುವುದನ್ನು ಗಮನಿಸಿ ಅವರ ಹೆಸರು ಹೇಳಿ ದಯವಿಟ್ಟು ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳಿ ಕೊರೊನಾ ತಡೆಗಟ್ಟಲು ಸಹಕರಿಸಿ. ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ಮೈಕ್ ಮೂಲಕ ಹೇಳುತ್ತಿರುವುದನ್ನು ಕಂಡ ಸಾರ್ವಜನಿಕರು ತಕ್ಷಣ ಎಚ್ಚೆತ್ತು ಮಾಸ್ಕ್ ಧರಿಸಿಕೊಂಡಿದ್ದಾರೆ.

ಕೊರೊನಾ ಮಹಾಮಾರಿಯ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾದ ಸಾರ್ವಜನಿಕರು ಬೇಜವಾಬ್ದಾರಿತನದಿಂದ ಮಾಸ್ಕ್‌ಗಳನ್ನು ಧರಿಸದೇ ನಿರ್ಲಕ್ಷ್ಯ ತೋರುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದೆ. ಅಷ್ಟೇ ಅಲ್ಲದೇ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಸೋಂಕಿನ ಪ್ರಕರಣಗಳು ದಿನ ಕಳೆದಂತೆ 600ಕ್ಕೂ ಅಧಿಕ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗುತ್ತಿದೆ.

Comments

Leave a Reply

Your email address will not be published. Required fields are marked *