ಕೊರೊನಾ 2ನೇ ಅಲೆ ಹೇಗೆ ಹರಡುತ್ತಿದೆ ಅನ್ನೋದೆ ಗೊತ್ತಾಗುತ್ತಿಲ್ಲ – ಜೋಶಿ

ಧಾರವಾಡ: ಕೊರೊನಾ 2ನೇ ಅಲೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ, ಹೇಗೆ ಹರಡುತ್ತಿದೆ ಅನ್ನೋದೆ ಗೊತ್ತಾಗುತ್ತಿಲ್ಲ. ಇದು ಇಷ್ಟು ಪರಿಣಾಮ ಬೀರುತ್ತೆ ಎನ್ನುವ ಅಂದಾಜು ಇರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುದ್ಧೋಪಾದಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಕಾರ್ಯ ಮಾಡುತ್ತಿದೆ. ನಿನ್ನೆ 800 ಮಿಲಿಯನ ಟನ್ ಆಕ್ಸಿಜನ್ ಕರ್ನಾಟಕಕ್ಕೆ ಹಂಚಿಕೆಯಾಗಿದೆ, 1.25 ಲಕ್ಷ ರೆಮ್‍ಡಿಸಿವಿರ್ ವೈಲ್ ಬಂದಿದೆ. ರೆಮ್‍ಡಿಸಿವಿರ್ ಕೊರೊನಾಗೆ ಅಲ್ಟಿಮೆಟ್ ಡ್ರಗ್ ಅಲ್ಲ, ಆದರೂ ರೆಮ್‍ಡಿಸಿವಿರ್ ವಿಷಯದಲ್ಲಿ ಜನ ಪ್ಯಾನಿಕ್ ಆಗುತ್ತಿದ್ದಾರೆ, ಅದಕ್ಕಾಗಿ ಹೆಚ್ಚಿಗೆ ತರಿಸಿದ್ದೇವೆ ಎಂದು ಜೋಶಿ ಹೇಳಿದರು.

ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾದಡಿ ಬೆಡ್ ಕೇಳಿದ್ದೇವೆ. ಇದರೊಂದಿಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಶೇ.60 ರಿಯಾಯ್ತಿ ಕೊಡುವಂತೆ ವೀರೇಂದ್ರ ಹೆಗ್ಗಡೆಯವರಲ್ಲಿ ಈ ಸಂಬಂಧ ಮಾತುಕತೆ ಆಗಿದೆ, ಆಯುಷ್ಮಾನ್ ಭಾರತ ಅಡಿ 500 ಬೆಡ್ ಕೊಡಲು ಒಪ್ಪಿದ್ದಾರೆ. ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ನೂರು ಬೆಡ್ ಹೊಸದಾಗಿ ಸಿದ್ಧ ಆಗುತ್ತಿದೆ, ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ, ಜನ ಮಾತ್ರ ಯಾವುದಕ್ಕೂ ಹೆದರಬಾರದು, ಕೋವಿಡ್ ಕೇರ್ ಕೇಂದ್ರಗಳನ್ನು ಹೆಚ್ಚಳ ಮಾಡುತ್ತೇವೆ, ದೇಶಕ್ಕೆ ಜರ್ಮನಿಂದ ಮೊಬೈಲ್ ಆಕ್ಸಿಜನ್ ಪ್ಲ್ಯಾಂಟ್ ಸಹ ಏರ್ಲಿಫ್ಟ್ ಆಗುತ್ತಿವೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *