ಅಂತರ್ ಜಿಲ್ಲಾ ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು

ಮಡಿಕೇರಿ: ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳರನ್ನು ವಾಹನಗಳ ಸಹಿತ ಜಿಲ್ಲೆಯ ವಿರಾಜಪೇಟೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಿನ್ನೇನಳ್ಳಿ ಗ್ರಾಮದ ಸಿ.ಎ.ಉಮೇಶ, ಕೆ.ಆರ್ ಪೇಟೆಯ ಅಂಚನಳ್ಳಿ ಗ್ರಾಮದ ಎ.ಸಿ.ಹರೀಶ್ ಹಾಗೂ ಇದೇ ಗ್ರಾಮದ ಎ.ಎ.ಮನುಕುಮಾರ್ ಬಂಧಿತ ಆರೋಪಿಗಳು. ಬೆಂಗಳೂರಿನ ಬಿಡದಿ, ಮೈಸೂರು, ಮಂಡ್ಯ ಸೇರಿದಂತೆ ವಿವಿಧ ಕಡೆಗಳಿಂದ ಕಳ್ಳತನ ಮಾಡಿದ ಸುಮಾರು 3.50 ಲಕ್ಷ ರೂ. ಮೌಲ್ಯದ ಒಟ್ಟು 5 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏ.18ರಂದು ಸಂಜೆ ವಿರಾಜಪೇಟೆ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ಇರುವ ಅಂಗಡಿಯೊಂದರ ಮಾಲೀಕ ಕೆ.ಎಂ.ಇಬ್ರಾಹಿಂ ಅವರ ಸ್ಕೂಟರ್ ಕಳವಾದ ಬಗ್ಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಏ.19ರಂದು ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ವಿರಾಜಪೇಟೆ ನಗರದ ಅಪರಾಧ ವಿಭಾಗದ ಎಸ್.ಐ ಬೋಜಪ್ಪ ಹಾಗೂ ಸಿಬ್ಬಂದಿ, ಇಂದು ಬೆಳಗ್ಗೆ ಪ್ರಕರಣದ ಪ್ರಮುಖ ಆರೋಪಿ ಮಂಡ್ಯ ಜಿಲ್ಲೆಯ ಉಮೇಶ್‍ನನ್ನು ಕದನೂರು ಬಳಿ ಹಾಗೂ ಉಳಿದ ಆರೋಪಿಗಳನ್ನು ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ. ವಾಹನ ಚೋರರನ್ನು ಕೇವಲ 48 ಗಂಟೆಗಳಲ್ಲಿ ಬಂಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಗ್ಗೆ ಎಸ್‍ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *