ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂತ್ಯ

ಬೆಂಗಳೂರು: ಹೈಕೋರ್ಟ್ ಸೂಚನೆ ಹಿನ್ನೆಲೆ ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದೆ. ನ್ಯಾಯಾಲಯಕ್ಕೆ ಗೌರವ ಕೊಟ್ಟು ಮುಷ್ಕರ ವಾಪಸ್ ಪಡೆದುಕೊಂಡಿದ್ದೇವೆ ಎಂದು ಸಾರಿಗೆ ನೌಕರರ ಒಕ್ಕೂಟ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ನ್ಯಾಯಾಲಯದ ಸೂಚನೆ ಮೇರೆಗೆ ಇಂದು ಹಲವರು ಕೆಲಸಕ್ಕೆ ಹಾಜರಾಗಲು ಹೋಗಿದ್ದಾರೆ. ಆದ್ರೆ ಮುಂದೆ ಮುಷ್ಕರದಲ್ಲಿ ಭಾಗಿಯಾಗಲ್ಲ ಎಂದು ಸರ್ಕಾರ ಮುಚ್ಚಳಿಕೆ ಬರೆಸಿಕೊಳ್ಳುತ್ತಿದೆ. ಹೋರಾಟ ನಮ್ಮ ಮೂಲಭೂತ ಹಕ್ಕು. ಇದನ್ನ ಕಸಿದುಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.

ನ್ಯಾಯಾಲಯ ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನ ನಾವು ತಿರಸ್ಕಾರ ಮಾಡಲ್ಲ. ನಾಳೆಯಿಂದ ಕೆಲಸಕ್ಕೆ ಹಾಜರಾಗಲು ನಿರ್ದೇಶನ ನೀಡಿದ್ದೇವೆ. ನಾಳೆ ನ್ಯಾಯಾಲಯಕ್ಕೆ ನಾವು ಅರ್ಜಿ ಹಾಕಲಿದ್ದೇವೆ. ನ್ಯಾಯಾಲಯದ ಆದೇಶವನ್ನ ಗೌರವಿಸಿ ತಾತ್ಕಾಲಿಕವಾಗಿ ಮುಷ್ಕರ ಮುಂದೂಡಿಕೆ ಮಾಡಲಾಗಿದೆ. ಸರ್ಕಾರ ಸಹ ನಮ್ಮ ಬೇಡಿಕೆಗಳನ್ನ ಬಗೆಹರಿಸಿ. ಮುಷ್ಕರದ ವೇಳೆ 2,169 ಜನರನ್ನ ವಜಾ ಮತ್ತು 2,049 ಜನರನ್ನ ಅಮಾನತು ಮಾಡಲಾಗಿದೆ. 8 ಸಾವಿರ ಮಂದಿಯನ್ನ ವರ್ಗಾವಣೆ ಮಾಡಲಾಗಿದೆ. ಸರ್ಕಾರ ಕೂಡಲೇ ಇದನ್ನ ತೆರವು ಮಾಡಬೇಕು. ಡಿಸೆಂಬರ್ ನಲ್ಲಿ ಕೊಟ್ಟಿರುವ ಬೇಡಿಕೆ ಈಡೇರುಸುವ ಕೆಲಸ ಸರ್ಕಾರ ಮಾಡಲಿ. ನ್ಯಾಯಾಲಯದ ತೀರ್ಮಾನ ಏನೇನ್ ಆಗುತ್ತೆ ಅನ್ನೋದನ್ನು ಕಾದು ನೋಡುತ್ತೇವೆ ಎಂದು ತಿಳಿಸಿದರು.

ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ. ಆದ್ರೂ ನ್ಯಾಯಾಲಯ ಸೂಚಿಸಿದ ಹಿನ್ನಲೆ ಮುಷ್ಕರ ಅಂತ್ಯ ಮಾಡ್ತಿದ್ದೀವಿ. ಸಿಎಂಗೂ ಆರೋಗ್ಯ ಸರಿ ಇಲ್ಲ ಮೇ ತಿಂಗಳಿನಲ್ಲಿ ಸಿಎಂ ಚರ್ಚಿಸೋಣ ಎಂದು ಭರವಸೆ ನೀಡಿದ್ದಾರೆ. ಜೊತೆಗೆ ನಾಳೆ ನ್ಯಾಯಾಲಯದಲ್ಲೂ ನಮ್ಮ ಕುಂದುಕೊರತೆ ದಾಖಲಿಸುತ್ತೇವೆ. ನಾಳೆ ಹೇಳಿಕೆ ದಾಖಲಿಸೋ ಪ್ರಕ್ರಿಯೆ ವೇಳೆ ನಮ್ಮೆಲ್ಲಾ ಸಮಸ್ಯೆಗಳನ್ನ ಹೇಳಿಕೊಳ್ಳುತ್ತೇವೆ. ಸದ್ಯಕ್ಕೆ ನಾವು ಘನ ನ್ಯಾಯಾಲಯದ ಆದೇಶದ ಮೇರೆಗೆ ಈ ಮುಷ್ಕರ ನಿಲ್ಲಿಸುತ್ತಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *