ಶರವೇಗದಲ್ಲಿ ಓಡಿ ಮಗುವಿನ ಪ್ರಾಣ ಉಳಿಸಿದ್ದ ಸಾಹಸಿಗೆ ಬೈಕ್ ಗಿಫ್ಟ್!

– ಕೇಂದ್ರ ರೈಲ್ವೇ ಇಲಾಖೆಯಿಂದ 50 ಸಾವಿರ ಬಹುಮಾನ

ಮುಂಬೈ: ಶರವೇಗದಲ್ಲಿ ಓಡಿ ರೈಲು ಬರುತ್ತಿರುವುದನ್ನು ಲೆಕ್ಕಿಸದೆ ಹಳಿ ಮೇಲೆ ಸಿಲುಕಿದ್ದ ಮಗುವನ್ನು ರಕ್ಷಿಸಿದ ವ್ಯಕ್ತಿಗೆ ಈಗ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತೆಯೇ ಇದೀಗ ರೈಲ್ವೆ ವಲಯದ ಪಾಯಿಂಟ್ ಮನ್ ಮಯೂರ್ ಶೆಳಕೆಗೆ ಕೇಂದ್ರ ರೈಲ್ವೆ ಇಲಾಖೆಯಿಂದ 50 ಸಾವಿರ ರೂ. ಬಹುಮಾನ ನೀಡಿದರೆ, ಇತ್ತ ಬೈಕ್ ಕೂಡ ಉಡುಗೊರೆಯಾಗಿ ಸಿಕ್ಕಿದೆ.

ಮಗುವನ್ನು ರಕ್ಷಿಸಿದ ಮಯೂರ್ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆಯೇ ಅವರಿಗೆ ಮೆಚ್ಚುಗೆಯ ಮಹಾಪೂರಗಳೇ ಹರಿಬಂದಿದೆ. ಮಯೂರ್ ಅವರ ಈ ಮಾನವೀಯ ಕಾರ್ಯ ಹಾಗೂ ಧೈರ್ಯಕ್ಕೆ ರೈಲ್ವೇ ಇಲಾಖೆ ಹಣ ನೀಡುವ ಮೂಲಕ ಗೌರವ ತೋರಿದರೆ, ಇತ್ತ ಜಾವಾ ಕ್ಲಾಸಿಕ್ ಬೈಕ್ ಉಡುಗೊರೆಯಾಗಿ ದೊರೆಯಲಿದೆ.

ಮಹೀಂದ್ರಾ ಕಂಪನಿ ಪಡೆತನದ ಜಾವಾ ಬೈಕ್ಸ್ ಸಿಇಓ ಅನುಪಮ್ ಥರೇಜಾ ಅವರು ಮಯೂರ್ ಅವರ ಸಾಹಸಕ್ಕೆ ತಲೆಬಾಗಿ ಸಂಸ್ಥೆ ವತಿಯಿಂದ ಜಾವಾ ಕ್ಲಾಸಿಕ್ ಬೈಕ್ ಉಡುಗೊರೆ ನೀಡುವುದಾಗಿ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ. ಮಯೂರ್ ಅವರ ಧೈರ್ಯ ಮೆಚ್ಚಿ ಅವರಿಗೆ ಜಾವಾ ಬೈಕ್ ಉಡುಗೊರೆಯಾಗಿ ನೀಡಲು ಇಚ್ಚಿಸುತ್ತೇವೆ. ಅವರ ಸಾಹಸ ಕಾರ್ಯಕ್ಕೆ ಈ ಮೂಲಕವಾಗಿ ಗೌರವ ನೀಡುವುದಾಗಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಏನಿದು ಘಟನೆ..?
ಮಹಾರಾಷ್ಟ್ರದ ಮುಂಬೈನ ವಂಗನಿ ರೈಲು ನಿಲ್ದಾಣದ ಎರಡನೇ ಪ್ಲಾಟ್‍ಫಾರ್ಮ್‍ನಲ್ಲಿ ಏಪ್ರಿಲ್ 17ರಂದು ಮಧ್ಯಾಹ್ನ ಮಹಿಳೆ ಮತ್ತು ಮಗು ನಡೆದುಕೊಂಡು ಹೋಗುತ್ತಿದ್ದಾಗ ಮಗು ಆಯ ತಪ್ಪಿ ಹಳಿ ಮೇಲೆ ಬಿದ್ದಿದೆ. ಎದುರಿನಿಂದ ರೈಲು ಅತ್ಯಂತ ವೇಗವಾಗಿ ಮಗು ಬಿದ್ದ ಹಳಿ ಮೇಲೆಯೇ ಬರುತ್ತಿತ್ತು. ಮಗುವಿನ ಜೊತೆಗೆ ಇದ್ದ ಮಹಿಳೆ ಭಯಗೊಂಡು ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಭಯದಿಂದ ಮಗುವನ್ನು ಕಾಪಾಡಲು ನೋಡುತ್ತಿದ್ದರು. ಮಗು ಹಳಿ ಮೇಲೆ ಬಿದ್ದಿರುವುದನ್ನು ಕಂಡು ರೈಲು ನಿಲ್ದಾಣದ ಕೆಲಸಗಾರ ಮಯೂರ್ ಶೆಲ್ಕೆ ಮಿಂಚಿನ ವೇಗದಲ್ಲಿ ಓಡಿ ಮಗುವನ್ನು ಎತ್ತಿ ಪ್ಲಾಟ್‍ಫಾರ್ಮ್ ಮೇಲೆ ಹಾಕಿದರು. ರೈಲು ಡಿಕ್ಕಿ ಹೊಡೆಯುತ್ತದೆ ಎನ್ನುವಷ್ಟರಲ್ಲಿ ಕೆಲವೇ ಸೆಕೆಂಡುಗಳಲ್ಲಿ ಪ್ಲಾಟ್‍ಫಾರ್ಮ್ ಮೇಲೆ ಹಾರಿ ತಮ್ಮ ಪ್ರಾಣ ಹಾಗೂ ಮಗುವಿನ ಪ್ರಾಣವನ್ನು ಉಳಿಸಿದ್ದರು.

ಈ ದೃಶ್ಯ ಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೆ ಆ ಬಳಿಕ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ಘಟನೆಯ ವೀಡಿಯೋವನ್ನು ಕೇಂದ್ರ ರೈಲ್ವೇ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡು, ಮಗುವಿನ ಜೀವ ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ನೌಕರನ ಧೈರ್ಯ ಮತ್ತು ಕರ್ತವ್ಯದ ಬಗ್ಗೆ ಅತ್ಯಂತ ಭಕ್ತಿಗೆ ನಮಸ್ಕರಿಸುತ್ತೇವೆ. ನೌಕರನಿಗೆ ಅಭಿನಂದನೆಗಳು ಎಂದು ಬರೆದುಕೊಂಡಿತ್ತು. ರೈಲ್ವೆ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿ ಉಳಿದ ಸಿಬ್ಬಂದಿ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದರು.

Comments

Leave a Reply

Your email address will not be published. Required fields are marked *