ಖಾಸಗಿ ವಾಹನ ಮಾಲೀಕರ ಷರತ್ತಿಗೆ ಒಪ್ಪಿಗೆ – ಸರ್ಕಾರದ ಪರ್ಯಾಯ ವ್ಯವಸ್ಥೆ ಏನು?

ಬೆಂಗಳೂರು: ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರ ಖಾಸಗಿ ವಾಹನಗಳಿಗೆ ಮಣೆ ಹಾಕಲು ನಿರ್ಧರಿಸಿದೆ.

ಸಾವಿರ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್, ಮಿನಿ ಬಸ್, ಶಾಲಾ ಬಸ್, ಟಿಟಿ ಸೇರಿ ಒಟ್ಟು 32 ಸಾವಿರ ವಾಹನಗಳನ್ನು ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಸರ್ಕಾರ ನಿಗದಿ ಪಡಿಸಿದ ದರವನ್ನು ಪ್ರಯಾಣಿಕರಿಂದ ಖಾಸಗಿ ವಾಹನಗಳು ಪಡೆಯಬೇಕು ಎಂಬ ನಿರ್ದೇಶನ ನೀಡಿದೆ.

ಈ ಬೆನ್ನಲ್ಲೇ, ಖಾಸಗಿ ವಾಹನಗಳಿಗೆ ಏಪ್ರಿಲ್ ತಿಂಗಳ ತೆರಿಗೆ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ವಾಹನಗಳ ಓಡಾಟಕ್ಕೆ ಪೊಲೀಸ್ ಇಲಾಖೆ ಫ್ರೀ ಪರ್ಮಿಟ್ ನೀಡಿದೆ. ಖಾಸಗಿ ವಾಹನಗಳಿಗೆ ಸೂಕ್ತ ಭದ್ರತೆ ನೀಡಲು ಸಹ ಪೊಲೀಸ್ ಇಲಾಖೆ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಮೆಟ್ರೋ ಸೇವೆಯ ಅವಧಿಯನ್ನು ಮಧ್ಯರಾತ್ರಿವರೆಗೂ ವಿಸ್ತರಿಸಲಾಗಿದೆ. ಐದು ನಿಮಿಷಕ್ಕೊಂದು ಮೆಟ್ರೋ ಓಡಾಡಲಿದೆ. ರಜೆಗಳು ಬರುತ್ತಿರುವ ಕಾರಣ ಹೆಚ್ಚು ರೈಲು ಓಡಿಸುವಂತೆ ರೈಲ್ವೇ ಇಲಾಖೆಗೂ ಮನವಿ ಸಲ್ಲಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇದಕ್ಕೂ ಮುನ್ನ ಖಾಸಗಿ ಬಸ್‍ಗಳನ್ನು ರಸ್ತೆಗೆ ಇಳಿಸಲು ಒಕ್ಕೂಟ ಷರತ್ತು ವಿಧಿಸಿತ್ತು. ಒಂದು ತಿಂಗಳು ರಸ್ತೆ ತೆರಿಗೆ ವಿಧಿಸಬಾರದು, 3 ತಿಂಗಳ ಮುಂಗಡ ತೆರಿಗೆಯನ್ನು ಒಂದು ತಿಂಗಳಿಗೆ ಇಳಿಸಬೇಕು. ಪ್ರತಿ ಬಸ್‍ಗೂ ಸೂಕ್ತ ಭದ್ರತೆ ನೀಡಿದಲ್ಲಿ ಬಸ್ ಓಡಿಸಲು ರೆಡಿ ಎಂದು ಖಾಸಗಿ ಬಸ್‍ಗಳ ಮಾಲೀಕರ ಸಂಘ ಹೇಳಿತ್ತು.

ಡ್ಯೂಟಿಗೆ ಬರೋದು ಬಿಡೋದು ಅವರ ಇಲಾಖೆಗೆ ಸಂಬಂಧಿಸಿದ್ದು. ಆದರೆ ಯಾರಾದ್ರೂ ರಸ್ತೆಗಿಳಿದು ಪ್ರತಿಭಟನೆ ನಡೆಸಿ ಕಲ್ಲು ತೂರಾಟ ಮಾಡಿದರೆ ತಕ್ಕ ಶಾಸ್ತಿ ಮಾಡುತ್ತೇವೆ. ಮುಲಾಜಿಲ್ಲದೇ ಅರೆಸ್ಟ್ ಮಾಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *