ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಪರಿಸ್ಥಿತಿ ಕಸದ ತೊಟ್ಟಿಯಲ್ಲಿರುವ ವಸ್ತುವಂತಾಗಿದೆ- ಈಶ್ವರಪ್ಪ ವಾಗ್ದಾಳಿ

– ಸಿದ್ದರಾಮಯ್ಯಗೆ ತಲೆ ಕೆಟ್ಟು ಹೋಗಿದೆ, ಹುಚ್ಚರಂತೆ ಮಾತಾಡ್ತಾರೆ

ಶಿವಮೊಗ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ತಲೆ ಕೆಟ್ಟು ಹೋಗಿದೆ. ಹೀಗಾಗಿಯೇ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸದ ಬಗ್ಗೆ ಏನು ಉತ್ತರ ಕೊಡಬೇಕೆಂದು ಅವರಿಂದ ನೋಡಲು ಆಗುತ್ತಿಲ್ಲ, ಕೇಳಲೂ ಆಗುತ್ತಿಲ್ಲ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಸಿದ್ದರಾಮಯ್ಯ ಅವರಿಗೆ ಹುಚ್ಚು ಹಿಡಿದಿದೆ ಎಂದರು.

ಸಿದ್ದರಾಮಯ್ಯ ಅವರು ನನ್ನ ಇಲಾಖೆ ಬಗ್ಗೆ ಮಾತನಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಹೀಗಾಗಿ ಈಶ್ವರಪ್ಪ ಸಚಿವ ಸ್ಥಾನದಲ್ಲಿ ಒಂದು ನಿಮಿಷನೂ ಮುಂದುವರಿಯಬಾರದು ಎಂದಿದ್ದಾರೆ. ನಾಳೆ ಅಥವಾ ನಾಡಿದ್ದು ಬೆಂಗಳೂರಿನಲ್ಲಿ ನಮ್ಮ ಇಲಾಖೆಯಲ್ಲಿ ಅಧಿಕಾರಿಗಳು ಏನೇನು ಸಾಧನೆ ಮಾಡಿದ್ದಾರೆ ಎಂದು ಪಟ್ಟಿ ಸಮೇತ ಕೊಡುತ್ತೇನೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದಾಗಿನಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಏನೇನು ಅಭಿವೃದ್ಧಿ ಕೆಲಸ ಆಗಿದೆ ಎನ್ನುವ ಬಗ್ಗೆ ಪಟ್ಟಿ ಸಮೇತ ಕೊಡುತ್ತೇನೆ. ನಮ್ಮ ಅವಧಿಯಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸ ಆಗುತ್ತಿರುವುದು ಸಹಿಸಲಾರದೇ ತಲೆ ಕೆಟ್ಟು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಏನು ಮಾತನಾಡುತ್ತಿದ್ದೇನೆ ಎಂಬ ಕಲ್ಪನೆ ಕೂಡಾ ಅವರಿಗೆ ಇಲ್ಲ ಎಂದು ಸಚಿವ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಪಕ್ಷದಲ್ಲೇ ನಿಮ್ಮ ಮಾತನ್ನು ಕೇಳುತ್ತಿಲ್ಲ ಎಂದು ನೀವೇ ಮೈಸೂರು ಬಿಟ್ಟು ಹೋಗಿ, ನಾಲ್ಕು ದಿನ ರೆಸಾರ್ಟ್ ನಲ್ಲಿ ಕುಳಿತಿದ್ದೆ. ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಮಾತು ಕೇಳಿಲ್ಲ, ನನ್ನ ಕೇಳದೆ ಮೇಯರ್ ಉಪ ಮೇಯರ್ ಮಾಡಿದರು ಎಂದು ಮೈಸೂರು ಬಿಟ್ಟು ಹೋಗಿದ್ದವರು ನೀವು ಎಂದು ಏಕ ವಚನದಲ್ಲೇ ಹರಿಹಾಯ್ದರು.

ಸಿದ್ದರಾಮಯ್ಯನವರ ಮಾತು ಕೇಳದೆ ಮೇಯರ್, ಉಪ ಮೇಯರ್ ಮಾಡಿದ್ದು ಅನ್ಯಾಯ ಎಂಬ ಮಾತನ್ನು ಸ್ವತಃ ರಮೇಶ್ ಕುಮಾರ್ ಅವರೇ ಹೇಳಿದ್ದರು. ಕಾಂಗ್ರೆಸ್ ನಲ್ಲಿ ನೀವು ಕಸದ ತೊಟ್ಟಿಯಲ್ಲಿರುವ ವಸ್ತು ರೀತಿ ಆಗಿ ಬಿಟ್ಟಿದ್ದೀರಿ. ಕಾಂಗ್ರೆಸ್ ನಲ್ಲಿ ನಿಮ್ಮ ಮಾತನ್ನು ಕೇಳುವವರೇ ಇಲ್ಲ. ನೀವು ನಮಗೆ ಹೇಳುವುದಕ್ಕೆ ಬರುತ್ತೀರಾ ಎಂದು ಸಚಿವ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *