ಸರ್ಕಾರದ ವಿರುದ್ಧ ಅಪ್ಪು ಫ್ಯಾನ್ಸ್ ಆಕ್ರೋಶ – ಆದೇಶದ ಮರುಪರಿಶೀಲನೆಗೆ ಚಿತ್ರಮಂಡಳಿ ಒತ್ತಾಯ

– ಯುವರತ್ನ ಗೆದ್ದು ಬರಲಿ ಅಂದ್ರು ಪೈಲ್ವಾನ್
– ಸುಧಾಕರ್ ರಾಜೀನಾಮೆಗೆ ನಿರ್ಮಾಪಕ ಮಂಜು ಆಗ್ರಹ

ಬೆಂಗಳೂರು: ಕೊರೊನಾ ಎರಡನೇ ಅಲೆ ಹಿನ್ನೆಲೆ ಸರ್ಕಾರ ಕೆಲವೊಂದು ಕಠಿಣ ನಿಯಮಗಳು ಜಾರಿಗೆ ತಂದಿದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಸರ್ಕಾರ ಅವಕಾಶ ಕಲ್ಪಿಸಿರೋದಕ್ಕೆ ಚಿತ್ರಮಂಡಳಿ ಬೇಸರ ವ್ಯಕ್ತಪಡಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವಾಗ ಈ ಟಫ್ ರೂಲ್ಸ್ ಗಳು ನಮ್ಮನ್ನ ಮತ್ತಷ್ಟು ಚಿತ್ರರಂಗದ ಮೇಲೆ ದೊಡ್ಡ ಹೊಡೆತ ನೀಡಲಿವೆ. ಹಾಗಾಗಿ ಸರ್ಕಾರ ಆದೇಶವನ್ನು ಮರು ಪರಿಶೀಲಿಸಬೇಕೆಂದು ಚಿತ್ರಮಂಡಳಿ ಒಕ್ಕೊಲಿರಿನಿಂದ ಒತ್ತಾಯಿಸಿದೆ.

ಸರ್ಕಾರದ ಆದೇಶದ ಬೆನ್ನಲ್ಲೇ ಇಂದು ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ತುರ್ತು ಸಭೆ ನಡೆಸಿತು. ಸಭೆಯ ಬಳಿಕ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೆಗೌಡರು, ಏಕಾ ಏಕಿ ಈ ನಿರ್ಧಾರ ಮಾಡಿದ್ದು ನಮಗೆ ದೊಡ್ಡ ಆಘಾತ. ನಾವು ಎಲ್ಲಿ ಹೋಗಬೇಕು? ಏನ್ ಮಾಡಬೇಕು? ನಿರ್ಮಾಪಕನ ಕಥೆ ಏನು? ಇದು ಯಾವ್ ಸೀಮೆ ನ್ಯಾಯ,, ತಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ನಿರ್ಧಾರಕ್ಕೆ ಲಾಜಿಕ್ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಏಕಾಏಕಿ ಈ ನಿರ್ಧಾರದಿಂದ ನಿರ್ಮಾಪಕರಿಗೆ ತೊಂದರೆಯಾಗಿದೆ. ವಾಣಿಜ್ಯ ಮಂಡಳಿ ಪದಾಧಿಕರಿಗಳ ಸಭೆಯ ನಂತ್ರ ಮುಖ್ಯ ಮಂತ್ರಿಗಳನ್ನ ಭೇಟಿಯಾಗಲು ನಿರ್ಧರಿಸಲಾಗುವುದು. ಮೇ ವರೆಗೂ ನಾಲ್ಕು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಬೇಕು. ಮತ್ತೆ ಮೊದಲಿನ ಹಾಗೆ ಶೇ.100ರಷ್ಟು ಭರ್ತಿಗೆ ಅವಕಾಶ ನೀಡಿ ಎಂದು ಸರ್ಕಾರದ ನಡೆಗೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ವಿರೋಧ ವ್ಯಕ್ತಪಡಿಸಿದರು.

ಸಿನಿಮಾದವರ ಮೇಲೆ ಯಾಕೆ ಸುಧಾಕರ್ ಅವರು ಹೀಗೆ ಮಾಡ್ತಿದ್ದಾರೆ. ಗುರುವಾರ ಸಿನಿಮಾ ರಿಲೀಸ್ ಆಗುತ್ತೆ, ಶುಕ್ರವಾರ 50% ಮಾಡ್ತಾರೆ. ವಾರ್ತಾ ಸಚಿವರಿದ್ದಾರೆ, ಫಿಲಂ ಚೇಂಬರ್ ಇದೇ ಯಾರನ್ನೂ ಕೇಳದೆ ಯಾಕೆ ಹೀಗೆ ಮಾಡ್ತಾರೆ. ಸಚಿವ ಸುಧಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ನಿರ್ಮಾಪಕ ಮಂಜು ಆಗ್ರಹಿಸಿದರು.

ಅಭಿಮಾನಿಗಳ ಪ್ರತಿಭಟನೆ: ಫಿಲಂ ಚೇಂಬರ್ ಮುಂದೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಸಚಿವ ಸುಧಾಕರ್ ಅವರಿಗೆ ಫೋನ್ ಮಾಡುವಂತೆ ವಾಟ್ಸಪ್ ಗ್ರೂಪ್ ಗಳಲ್ಲಿ ಚರ್ಚೆ ನಡೆಸಲಾಗುತ್ತಿದ್ದು, ಸಚಿವರ ಮೊಬೈಲ್ ನಂಬರ ಶೇರ್ ಮಾಡಲಾಗುತ್ತಿದೆ.

ಸುದೀಪ್ ಟ್ವೀಟ್: ಸರ್ಕಾರದ ಶೇ.50ರಷ್ಟು ಆಸನ ಭರ್ತಿಗೆ ನಟ ಸುದೀಪ್ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡೋದು ನಮ್ಮ ಕರ್ತವ್ಯ. ಈ ಸಮಯದಲ್ಲಿ ಯುವರತ್ನ ಗೆದ್ದು ಬರಲಿ ಎಂದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *