ಅಸ್ಸಾಂ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ – ಡಿಎಂಕೆಯ ಸ್ಟಾಲಿನ್ ಅಳಿಯನಿಗೆ ಐಟಿ ಶಾಕ್

ದಿಸ್ಪುರ್: ಪಂಚರಾಜ್ಯ ಚುನಾವಣಾ ರಾಜಕೀಯ ಜೋರಾಗಿದೆ. ಅಕ್ರಮಗಳೂ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಮತಯಂತ್ರಗಳು ಪತ್ತೆ ಆಗಿವೆ.

ನಿನ್ನೆ ಅಸ್ಸಾಂನಲ್ಲಿ ಮುಗಿದ 2ನೇ ಹಂತದ ಮತದಾನದ ಬಳಿಕ ಕರೀಮ್ ಗಂಜ್ ಜಿಲ್ಲೆಯ ಪಥರ್ ಕಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪೌಲ್ ಕಾರಿನಲ್ಲಿ ಇವಿಎಂಗಳು ಕಂಡುಬಂದಿದ್ದವು. ಪ್ರತಿಭಟಿಸಿದ ಜನರ ಮೇಲೆ ಪೊಲೀಸರು ಬಲ ಪ್ರಯೋಗ ಮಾಡಿದ್ರು. ಗಾಳಿಯಲ್ಲಿ ಗುಂಡು ಹಾರಿಸಿ ಲಾಠಿ ಕೂಡ ಬೀಸಿದ್ರು.

ಈ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಸೂಕ್ತ ಕ್ರಮ ಆಗದಿದ್ರೆ ಎಲೆಕ್ಷನ್ ಬಹಿಷ್ಕರಿಸುವ ಬೆದರಿಕೆ ಆಗಿತ್ತು. ಇಂದು ಮಧ್ಯಾಹ್ನ ಸ್ಪಂದಿಸಿದ ಚುನಾವಣಾ ಆಯೋಗ, ನಾಲ್ವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತು ಮಾಡಿದೆ. ಆ ಇವಿಎಂ ಇದ್ದ ಮತಗಟ್ಟೆಯಲ್ಲಿ ಮರುಮತದಾನ ನಡೆಸಲು ಮುಂದಾಗಿದೆ. ಅಯ್ಯೋ ನಾವೇನು ಇವಿಎಂ ಕದ್ದಿರಲಿಲ್ಲ. ಸಿಬ್ಬಂದಿಗೆ ಹೆಲ್ಪ್ ಮಾಡಿದ್ವಿ ಅಷ್ಟೇ ಎಂದು ಬಿಜೆಪಿಯ ಕೃಷ್ಣೆಂದು ಹೇಳಿದ್ದಾರೆ.

ಈ ಮಧ್ಯೆ ಡಿಎಂಕೆ ಪಕ್ಷದ ಮುಖ್ಯಸ್ಥ ಸ್ಟಾಲಿನ್ ಅಳಿಯ ಸೇರಿದಂತೆ ನಾಲ್ವರ ಮನೆ, ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದೆ. ಇದನ್ನು ಖಂಡಿಸಿರುವ ಎಂಕೆ ಸ್ಟಾಲಿನ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬೆನ್ನಲ್ಲೇ ಮೋದಿಜೀ ನಮ್ಮ ಕ್ಷೇತ್ರಕ್ಕೆ ಬಂದು ನಮ್ಮ ಎದುರಾಳಿಗಳ ಪರ ಪ್ರಚಾರ ಮಾಡಿ.. ನಾವು ಸುಲಭವಾಗಿ ಗೆಲ್ತೀವಿ ಎಂದು ಡಿಎಂಕೆ ಅಭ್ಯರ್ಥಿಗಳು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಅಮಿತ್ ಷಾ ಕಣ್ಸನ್ನೆಯಲ್ಲಿ ಬಂಗಾಳ ಚುನಾವಣೆ ನಡೆಯುತ್ತಿದೆ.. ಭಾರೀ ಅಕ್ರಮಗಳು ನಡೆಯುತ್ತಿವೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ ಹೊರಹಾಕಿದ್ದಾರೆ.

ರಾಬರ್ಟ್ ವಾದ್ರಾಗೆ ಕೊರೋನಾ ಬಂದ ಕಾರಣ ಪ್ರಿಯಾಂಕಾ ಗಾಂಧಿ ಸೆಲ್ಫ್ ಕ್ವಾರಂಟೇನ್ ಆಗಿದ್ದು, ಪ್ರಚಾರದಿಂದ ದೂರ ಉಳಿದಿದ್ದಾರೆ.

Comments

Leave a Reply

Your email address will not be published. Required fields are marked *