ಮೇಯರ್ ಚುನಾವಣೆ ಎಫೆಕ್ಟ್ – ಸೇಠ್ ಆಪ್ತರಿಗೆ ಅಮಾನತು ಶಿಕ್ಷೆ

– ಸೇಠ್ ಆಪ್ತರಿಗೆ ಸಿದ್ದರಾಮಯ್ಯ ಶಾಕ್

ಮೈಸೂರು: ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಆಂತರಿಕ ಕಲಹಗಳು ಬಹಿರಂಗಗೊಂಡಿದ್ದವು. ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಮಾಧ್ಯಮಗಳ ಮುಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಇಂದು ತನ್ವೀರ್ ಸೇಠ್ ಬಣದಲ್ಲಿ ಗುರುತಿಸಿಕೊಂಡಿದ್ದ ಮೂವರನ್ನ ಕಾಂಗ್ರೆಸ್ ನಿಂದ ಅಮಾನತುಗೊಳಿಸಿ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಆದೇಶ ಹೊರಡಿಸಿದ್ದಾರೆ.

ಅಜೀಜ್ ಸೇಠ್ ಬ್ಲಾಕ್ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್, ಡಿಸಿಸಿ ಉಪಾಧ್ಯಕ್ಷ ಅನ್ವರ್ ಪಾಷ(ಅಣ್ಣು) ಮತ್ತು ಕೆಪಿಸಿಸಿ ಸದಸ್ಯ ಪಿ.ರಾಜು ಅಮಾನತ್ತಾದ ಕಾಂಗ್ರೆಸ್ ಮುಖಂಡರು. ಸಿದ್ದರಾಮಯ್ಯರ ವಿರುದ್ಧ ಪ್ರತಿಭಟನೆ ಮಾಡಿ, ಘೋಷಣೆ ಕೂಗಿದ ಆರೋಪದಡಿ ಮೂವರನ್ನ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಭಟನೆ ಸಂಬಂಧ ನೋಟಿಸ್ ನೀಡಲಾಗಿತ್ತು. ಅಬ್ದುಲ್ ಖಾದರ್ ಬುಧವಾರ ನೋಟಿಸ್ ಗೆ ಲಿಖಿತ ಉತ್ತರ ನೀಡಿದ್ದರು. ಉತ್ತರ ನೀಡಿದ ಮರುದಿನವೇ ಮೂವರ ಅಮಾನತು ಆಗಿದೆ. ಇದನ್ನೂ ಓದಿ: ಮನೆ ಕಟ್ಟಿದೋರು ನಾವು, ರಾಜ್ಯ ಆಳಲು ಬರೋರು ನೂರಾರು ಜನ: ತನ್ವೀರ್ ಸೇಠ್

ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದವು. ಆದ್ರೆ ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕಾಂಗ್ರೆಸ್ ಸದಸ್ಯರು ಮತ ಚಲಾಯಿಸಿದ್ರೆ, ಉಪ-ಮೇಯರ್ ಪರವಾಗಿ ಜೆಡಿಎಸ್ ಸದಸ್ಯರು ಮತ ಚಲಾಯಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ತನ್ವೀರ್ ಸೇಠ್ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಚರ್ಚೆಗಳು ನಡೆದಿದ್ದವು. ಇದನ್ನೂ ಓದಿ: ಪಕ್ಷ ಬಲಪಡಿಸುವ ಕೆಲಸ ಮಾಡ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಆಕ್ರೋಶ

Comments

Leave a Reply

Your email address will not be published. Required fields are marked *