ಕಾಫಿ ಸಿಪ್ಪೆಯಡಿ ಬೀಟೆ ನಾಟಾ ಸಾಗಾಟ- ಇಬ್ಬರ ಬಂಧನ

– 30 ಲಕ್ಷ ರೂ. ಮೌಲ್ಯದ ಮಾಲು ವಶ

ಮಡಿಕೇರಿ: ಕಾಫಿ ಸಿಪ್ಪೆ ಹಾಗೂ ಭತ್ತದ ಹೊಟ್ಟಿನ ಮೂಟೆಗಳ ಅಡಿಯಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಇಟ್ಟು ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.

ಅರಣ್ಯ ಇಲಾಖೆ ಸಿಬ್ಬಂದಿ, ಸುಮಾರು 30 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಲಾರಿ ಚಾಲಕ ಸಿದ್ದಾಪುರದ ಇರ್ಷಾದ್ ಹಾಗೂ ಇಂಜಿಲಗೆರೆಯ ಮಣಿ ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಗಿನ ಜಾವ 2ಗಂಟೆ ಸುಮಾರಿಗೆ ಕುಶಾಲನಗರ ವಲಯದ ಆನೆಕಾಡು ಶಾಖಾ ವ್ಯಾಪ್ತಿಯ ರಸಲ್ ಪುರ ಗ್ರಾಮದಲ್ಲಿ, ಸಿದ್ದಾಪುರ ಕಡೆಯಿಂದ ಬರುತ್ತಿದ್ದ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ತಡೆದು ನಿಲ್ಲಿಸಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಕಾಫಿ ಸಿಪ್ಪೆ ಮತ್ತು ಭತ್ತದ ಹೊಟ್ಟಿನ ಮೂಟೆಗಳ ಕೆಳಗೆ ಮಧ್ಯೆ ಬಚ್ಚಿಟ್ಟಿದ್ದ ಸುಮಾರು 15 ಬೀಟೆ ನಾಟಾಗಳು ಪತ್ತೆಯಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡಯಲಾಗಿದೆ. ಲಾರಿ ಸಹಿತ 30 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದು, ನಾಟಾಗಳನ್ನು ಎಲ್ಲಿಂದ ಇಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಕುಶಾಲನಗರದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರಕರಣ ದಾಖಲು ಮಾಡಿಕೊಂಡು ಇದ್ದಾರೆ.

Comments

Leave a Reply

Your email address will not be published. Required fields are marked *