ನಂಬರ್ ಬ್ಲಾಕ್ ಮಾಡಿದ್ದಕ್ಕೆ ಗನ್ ಹಿಡಿದು ಬಂದ ಪ್ರಿಯಕರ

– ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆ

ನವದೆಹಲಿ: ಪ್ರೀತಿಸಲು ನಿರಾಕರಿಸಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದ ಮಾಜಿ ಪ್ರೇಯಸಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸುರೇಶ್ ಕದ್ಯಾನ್(32) ಎಂದು ಗುರುತಿಸಲಾಗಿದ್ದು, ಈತ ನಿವೃತ್ತ ಸೇನಾಧಿಕಾರಿಯ ಮಗನಾಗಿದ್ದಾನೆ. ಆರೋಪಿ ಸುರೇಶ್ ಕದ್ಯಾನ್‍ಗೆ ಪರವಾನಗಿ ಪಡೆದ ಪಿಸ್ತೂಲ್ ನೀಡಿದ್ದ ಸ್ನೇಹಿತ ಪವನ್(45) ಎಂಬಾತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಘಟನೆ ಕುರಿತಂತೆ ವಿಚಾರಣೆ ನಡೆಸಿದಾಗ ಯುವತಿ ಆರೋಪಿಯನ್ನು ಕಡೆಗಣಿಸಿ ಆತನ ಮೊಬೈಲ್ ನಂಬರ್‍ನನ್ನು ಬ್ಲಾಕ್ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಸುರೇಶ್ ತನ್ನ ಗೆಳತಿ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು, ಆಕೆಯ ಮನೆಗೆ ಆಕೆಯನ್ನು ಹುಡುಕಿಕೊಂಡು ಹೋಗಿದ್ದಾನೆ. ಆದರೆ ಯುವತಿ ಸುಭಾಷ್ ನಗರದಲ್ಲಿರುವ ತನ್ನ ಸ್ನೇಹಿತನ ಮನೆಗೆ ಹೋಗಿದ್ದಾಳೆ ಎಂಬ ವಿಚಾರ ತಿಳಿದು ಬಂದಿದೆ. ಹಾಗಾಗಿ ಅಲ್ಲಿಗೆ ತೆರಳಿದ ಸುರೇಶ್ ಕದ್ಯಾನ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆಯೊಡ್ಡಿದ್ದಾನೆ.

ಇದರಿಂದ ಹೆದರಿದ ಯುವತಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಘಟನೆ ಕುರಿತಂತೆ ವಿವರಿಸಿದ್ದಾಳೆ. ಅಲ್ಲದೆ ಇಬ್ಬರು ಪ್ರೀತಿಸುತ್ತಿದ್ದ ವೇಳೆ ಯುವತಿ ತನ್ನ ಫ್ರೆಂಡ್‍ಗೆ ಸುರೇಶ್ ಕದ್ಯಾನ್‍ನಿಂದ ಹಣ ಕೊಡಿಸಿದ್ದು, ಬ್ರೇಕ್ ಆಪ್ ಆದ ಬಳಿಕ ಹಣ ಹಿಂದಿರುಗಿ ನೀಡುವಂತೆ ಆರೋಪಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಉರ್ವಿಜಾ ಗೋಯೆಲ್ ಹೇಳಿದ್ದಾರೆ.

ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಬಳಸುತ್ತಿದ್ದ ಸ್ಕಾರ್ಪಿಯೋ ಕಾರಿನ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಸಹಾಯದಿಂದ ಟ್ರೆಸ್ ಮಾಡಿ ಹರಿಯಾಣದ ಜಾಜ್ಜರ್‍ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *