ಮೆಣಸು ಕೊಯ್ಯುವಾಗ ವಿದ್ಯುತ್ ಶಾಕ್- ಯುವಕ ಸಾವು

ಚಿಕ್ಕಮಗಳೂರು: ಕಾಫಿತೋಟದಲ್ಲಿ ಮೆಣಸು ಕೊಯ್ಯುವಾಗ ವಿದ್ಯುತ್ ಶಾಕ್‍ನಿಂದ ಯುವಕ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದ ಸಮೀಪ ಉರ್ವಿನ್ ಖಾನ್ ಎಸ್ಟೇಟ್‍ನಲ್ಲಿ ನಡೆದಿದೆ.

ಮೃತನನ್ನು ಮಧ್ಯ ಪ್ರದೇಶ ಮೂಲದ 21 ವರ್ಷದ ವಿನೋದ್ ಎಂದು ಗುರುತಿಸಲಾಗಿದೆ. ಒಂದು ಬಳ್ಳಿಯಿಂದ ಮೆಣಸು ಕೊಯ್ದು ಮತ್ತೊಂದು ಮರದ ಬಳಿ ಅಲ್ಯೂಮಿನಿಯಂ ಏಣಿ ಕೊಂಡೊಯ್ಯುವಾಗ ತೋಟದೊಳಗೆ ಹೋಗಿರುವ ವಿದ್ಯುತ್ ತಂತಿಗೆ ಏಣಿ ತಾಗಿ ವಿನೋದ್ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ವಿದ್ಯುತ್ ಶಾಕ್‍ಗೆ ಒಳಗಾದ ಯುವಕನನ್ನು ಕೂಡಲೇ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಈ ರೀತಿ ಮೆಣಸನ್ನ ಕೊಯ್ಯುವಾಗ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿರುವುದು ಎರಡನೇ ಪ್ರಕರಣವಾಗಿದೆ. ಕಳೆದ ವಾರವಷ್ಟೇ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಾಫಿ ತೋಟದಲ್ಲಿ ಸಹ ಮೆಣಸು ಕೊಯ್ಯುವಾಗ ಹೊರರಾಜ್ಯದ ಕಾರ್ಮಿಕನೋರ್ವ ಸಾವನ್ನಪ್ಪಿದ್ದ. ಆತ ಸಹ ಮೆಣಸು ಕೊಯ್ಯಲು ಒಂದು ಮರದಿಂದ ಮತ್ತೊಂದು ಮರಕ್ಕೆ ಅಲ್ಯೂಮಿಲಿಯಂ ಏಣಿಯನ್ನ ಕೊಂಡೊಯ್ಯುವಾಗ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ್ದ.

Comments

Leave a Reply

Your email address will not be published. Required fields are marked *