ಎಷ್ಟೇ ಕೋಟಿ ಖರ್ಚಾಗಲಿ, ಅವರನ್ನ ಜೈಲಿಗೆ ಕಳಸ್ತೀನಿ: ಸಾಹುಕಾರ ಚಾಲೆಂಜ್

– ಸಿಡಿ ವಿಷ್ಯ 4 ತಿಂಗ್ಳು ಮೊದಲೇ ಗೊತ್ತಿತ್ತು
– ಹೊಲಸು ಕೆಲಸ ಮಾಡಿಲ್ಲ

ಬೆಂಗಳೂರು: ಸಿಡಿ ಷಡ್ಯಂತ್ರ ಹಿಂದಿರುವವರನ್ನು ಜೈಲಿಗೆ ಕಳುಹಿಸುತ್ತೇನೆ. ಯಶವಂತಪುರದ ಸುತ್ತಮುತ್ತ ಮತ್ತು ಹುಳಿಮಾವು ಬಳಿಯಲ್ಲಿ ಸಭೆಗಳು ನಡೆದಿವೆ. ಈ ಸಂಬಂಧ ಕಾನೂನು ಹೋರಾಟ ನಡೆಸುತ್ತೇನೆ. ಎಷ್ಟೇ ಖರ್ಚು ಆಗಲಿ, ಅವರನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರೋಧಿಗಳಿಗೆ ಚಾಲೆಂಜ್ ಹಾಕಿದ್ದಾರೆ.

ವೀಡಿಯೋ ರಿಲೀಸ್ ಮುನ್ನವೇ ಅಂದ್ರೆ 26 ಗಂಟೆ ಮೊದಲೇ ಈ ಬಗ್ಗೆ ಹೈಕಮಾಂಡ್ ನಿಂದ ಮಾಹಿತಿ ಲಭ್ಯವಾಗಿತ್ತು. ಹೈಕಮಾಂಡ್ ಮಟ್ಟದಲ್ಲಿರುವ ಆಪ್ತರು ಕಾನೂನಿನ ಕ್ರಮ ತೆಗೆದುಕೊಳ್ಳಲು ಸಲಹೆ ನೀಡಿದ್ದರು. ಬೆಳಗ್ಗೆ ಸಿಎಂ ಮತ್ತು ಗೃಹ ಸಚಿವರ ಜೊತೆ ಸಭೆ ನಡೆಸಿದ್ದೇನೆ. ನಂತರ ವಚನಾನಂದ ಸ್ವಾಮೀಜಿಗಳ ಜೊತೆ ಒಂದು ಗಂಟೆ ಸಭೆ ನಡೆಸಿದ್ದೇನೆ. ಸಂಜೆ ಆರೂವರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿದ್ದಾಗ ವೀಡಿಯೋ ರಿಲೀಸ್ ಆಗಿರುವ ವಿಷಯ ತಿಳಿಯಿತು ಎಂದು ಹೇಳಿದರು.

2+3+4 ಜನರ ಷಡ್ಯಂತ್ರ ಇದರಲ್ಲಿ ಅಡಗಿದೆ. ನಾನು ಯಾವುದೇ ತಪ್ಪು ಮಾಡಿರಲಿಲ್ಲ. ಹಾಗಾಗಿ ನನ್ನ ಕೆಲಸದಲ್ಲಿ ತೊಡಗಿಕೊಂಡಿದ್ದೆ. ನಾಲ್ಕು ತಿಂಗಳ ಹಿಂದೆಯೇ ಈ ವೀಡಿಯೋ ಸುದ್ದಿ ಬಂದಾಗ ಸೋದರ ಬಾಲಚಂದ್ರ ಜಾರಕಿಹೊಳಿ ಕೇಳಿದ್ದರು. ಆಗ ನಾನು ಅಂತಹ ಹೊಲಸು ಕೆಲಸ ಮಾಡಿಲ್ಲ ಅಂತ ಹೇಳಿದ್ದೆ. ಇಂತಹ 10 ದೂರುಗಳು ಬಂದ್ರೂ ನಾನು ಫೇಸ್ ಮಾಡುತ್ತೇನೆ.

ಓರ್ವ ಮಹಾನಾಯಕ: ಸಿಡಿ ಕೇಸ್ ಪ್ರಕರಣದ ಬೆಳಕಿಗೆ ಬಂದ ಮರುದಿನದಿಂದ ಅಜ್ಞಾತ ಸ್ಥಳದಲ್ಲಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ಘಟನೆ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇವೆ. ಯಶವಂತಪುರ ಮತ್ತು ಹುಳಿಮಾವಿನಲ್ಲಿ ಸಿಡಿ ಬಗ್ಗೆ ಪ್ಲಾನ್ ಮಾಡಲಾಗಿದೆ. ನಾಲ್ಕು ಮತ್ತು ಐದನೇ ಫ್ಲೋರ್ ನಲ್ಲಿ ಮೀಟಿಂಗ್ ನಡೆದಿದೆ ಎಂದು ಮಾತ್ರ ಹೇಳಬಲ್ಲೆ. ಓರ್ವ ಮಹಾನಾಯಕ ಈ ಷಡ್ಯಂತ್ರ ಹಿಂದಿದ್ದಾನೆ ಎಂದು ಆರೋಪಿಸಿದರು.

ಕಾಂಗ್ರೆಸ್, ಜೆಡಿಎಸ್‍ನಲ್ಲಿ ಶತ್ರುಗಳಿಲ್ಲ: ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ನನಗೆ ಯಾವ ಶತ್ರುಗಳಿಲ್ಲ. ಸಿಡಿ ಹಿಂದೆ ಇರುವ ಇಬ್ಬರ ನಾಯಕರಿದ್ದಾರೆ. ಸಮಯ ಬಂದಾಗ ಅವರಿಬ್ಬರ ಹೆಸರನ್ನ ಬಹಿರಂಗಗೊಳಿಸುತ್ತದೆ. ನಾನು ಅಪರಾಧಿಯಲ್ಲ, ನಿರಪರಾದಿ. ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ನನಗೆ ನೈತಿಕ ಬೆಂಬಲ ನೀಡಿದ್ದಾರೆ. ನನ್ನ ರಾಜಕೀಯ ಜೀವನ ಅಂತ್ಯಗೊಳಿಸಲು ಸಂಚು ರೂಪಿಸಲಾಗಿದೆ. ಈ ವಿಷಯದಲ್ಲಿ ಸೋದರ ಬಾಲಚಂದ್ರ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *