ಅಕ್ರಮ ಸಂಬಂಧಕ್ಕೆ ಮಗನೇ ಬಲಿ – 5 ತಿಂಗಳ ಬಳಿಕ ತಾಯಿ, ಗೆಳೆಯರು ಅರೆಸ್ಟ್

ಕೊಪ್ಪಳ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಮಗನನ್ನೇ ಕೊಲೆ ಮಾಡಿಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಜಿಲ್ಲೆಯ ಕಾರಟಗಿ ಪಟ್ಟಣದ ನಜೀರ್ ಸಾಬ್ ಕಾಲೋನಿ ನಿವಾಸಿ 12 ವರ್ಷದ ಮಲ್ಲಿಕಾರ್ಜುನ ಕಳೆದ ಅಕ್ಟೋಬರ್ 23 ರಂದು ನಿಗೂಢವಾಗಿ ಸಾವನ್ನಪ್ಪಿದ್ದನು. ಇದೀಗ ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮಲ್ಲಿಕಾರ್ಜುನ್ ತಾಯಿ ಲಕ್ಷ್ಮೀಯನ್ನು ಬಂಧಿಸಿದ್ದಾರೆ.

ಕಳೆದ ಅಕ್ಟೋಬರ್ 23 ರಂದು ರಾಯಚೂರು ಜಿಲ್ಲೆ ಬಳಗಾನೂರ ಬಳಿಯ ತುಂಗಭದ್ರಾ ಕಾಲುವೆಯಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ಮಲ್ಲಿಕಾರ್ಜುನ್ ಶವ ಪತ್ತೆಯಾಗಿತ್ತು. ಮಗನ ಸಾವಿನಿಂದ ಅನುಮಾನಗೊಂಡ ಮಲ್ಲಿಕಾರ್ಜುನ್ ತಂದೆ ಬಳಗಾನೂರ ಠಾಣೆಯಲ್ಲಿ ದೂರು ನೀಡಿದ್ದರು. ಇದಾದ ಬಳಿಕ ನವೆಂಬರ್ ನಲ್ಲಿ ಕಾರಟಗಿ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆಯಾಗಿತ್ತು. ಸಿಪಿಐ ಉದಯ ರವಿ ಮಲ್ಲಿಕಾರ್ಜುನ್ ನಿಗೂಢ ಸಾವಿನ ಪ್ರಕರಣ ಇದೀಗ ಬೇಧಿಸಿದ್ದಾರೆ. ಮಲ್ಲಿಕಾರ್ಜುನ್ ತಾಯಿ ಲಕ್ಷ್ಮೀ ಹಾಗೂ ಪ್ರಿಯಕರ ಲಾಲಸಾಬ್ ಮತ್ತು ಮಾವ ಸೋಮಣ್ಣ ಕೊಲೆ ಮಾಡಿ ಕಾಲುವೆಗೆ ಎಸೆದಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಲಕ್ಷ್ಮೀ ಲಾಲಸಾಬ್ ಹಾಗೂ ಮಾವ ಸೋಮಣ್ಣನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಕಾರಣಕ್ಕೆ ಮಗ ಅಡ್ಡಿಯಾಗುತ್ತಾನೆ ಎಂದು ಕೊಲೆ ಮಾಡಲಾಗಿದೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಕೊಲೆ ನಡೆದ ದಿನ ಲಕ್ಷ್ಮೀ ಯಾವ ಅನುಮಾನ ಬಾರದ ಹಾಗೆ ನಡೆದುಕೊಂಡಿದ್ದಳು. ಮಗನ ಕಳೆದುಕೊಂಡು ಕಣ್ಣೀರು ಹಾಕಿಕುತ್ತಿದ್ದ ಲಕ್ಷ್ಮೀ ಗಂಡ ಕಳಕಪ್ಪ ನಿಂದ ದೂರವಾಗಿದ್ದಳು. ಹೀಗಾಗಿ ಮಾವ ಸೋಮಣ್ಣ ಹಾಗೂ ಲಾಲಸಾಬ್ ನೊಂದಿಗೆ ಅನೈತಿಕ ಸಂಬಂಧ ಮುಂದುವರಿಸಿದ್ದಳು.

ಲಾಲಸಾಬ್ ಪತ್ನಿ ಹಾಗೂ ಲಕ್ಷ್ಮೀ ಸ್ವಸಹಾಯ ಸಂಘ ಮಾಡಿಕೊಂಡಿದ್ದರು. ಹಣಕಾಸಿನ ವಿಷಯಕ್ಕೆ ಲಾಲಸಾಬ್ ಲಕ್ಷ್ಮೀಗೆ ಪರಿಚಯವಾಗಿದ್ದ. ಪತಿಯಿಂದ ದೂರ ಇದ್ದ ಲಕ್ಷ್ಷೀ ಆತನೊಂದಿಗೆ ಸ್ನೇಹ ಬೆಳಸಿಕೊಂಡಿದ್ದಾಳೆ. ಲಾಲಾಸಾಬ್ ಜೊತೆ ತಾಯಿ ಇರೋದನ್ನು ಕೆಲ ಬಾರಿ ಮಲ್ಲಿಕಾರ್ಜುನ್ ನೋಡಿದ್ದ. ಅಷ್ಟೇ ಅಲ್ಲದೇ ಸ್ವಂತ ಮಾವನೊಂದಿಗೂ ಲಕ್ಷ್ಮೀ ಅನೈತಿಕ ಸಂಭಂದ ಹೊಂದಿರುವುದನ್ನು ಮಲ್ಲಿಕಾರ್ಜುನ್ ನೋಡಿದ್ದ. ಮುಂದೆ ಈತ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಾನೆ ಎಂಬ ಕಾರಣಕ್ಕೆ ಲಕ್ಷ್ಮೀ ಪ್ಲಾನ್ ಮಾಡಿ ಕೊಲೆ ಮಾಡಿಸಿದ್ದಾಳೆ.

ಒಟ್ಟಾರೆ ಐದು ತಿಂಗಳ ಹಿಂದೆ ನಡೆದ ನಿಗೂಢ ಸಾವಿನ ಸತ್ಯ ಪೊಲೀಸರ ತನಿಖೆಯಿಂದ ಇದೀಗ ಬಯಲಾಗಿದ್ದು, ಲಕ್ಷ್ಮೀ ಮತ್ತು ಇತರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ತನಿಖೆಯ ವೇಳೆ ಅಕ್ಕ ಪಕ್ಕದ ಮನೆಯವರು ಲಕ್ಷ್ಮೀಯ ಅಕ್ರಮ ಸಂಬಂಧದ ಬಗ್ಗೆ ಪೊಲೀಸರ ಬಳಿ ತಿಳಿಸಿದ್ದಾರೆ. ಇದರ ಜೊತೆ ಮೊಬೈಲ್ ಕರೆ ಪರಿಶೀಲನೆ ವೇಳೆ ಆರೋಪಿಗಳ ಬಗ್ಗೆ ಅನುಮಾನ ಬಂದು ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿದೆ.

Comments

Leave a Reply

Your email address will not be published. Required fields are marked *