ಒಂಟಿ ಮನೆಯ ಮಹಿಳೆ ಹತ್ಯೆಗೈದು ದರೋಡೆ

ಮಡಿಕೇರಿ: ಒಂಟಿ ಮನೆಯಲ್ಲಿ ಒಬ್ಬರೇ ಮಹಿಳೆ ಇರುವುದನ್ನು ಗಮನಿಸಿದ್ದ ಖದೀಮರು ಹತ್ಯೆ ಮಾಡಿ ಬಳಿಕ ದರೋಡೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೆ. ನಿಡುಗಣೆಯಲ್ಲಿ ನಡೆದಿದೆ.

ಲಲಿತಾ ಕೊಲೆಯಾದ ಮಹಿಳೆ. ಸುತ್ತಲೂ ತೋಟವಿದ್ದು, ತೋಟದೊಳಗೆ ಒಂಟಿ ಮನೆಯಿದೆ. ಈ ಮನೆಯಲ್ಲಿ ಆರೇಳು ವರ್ಷದಿಂದ ಒಬ್ಬರೇ ವಾಸವಾಗಿದ್ದರು, ಈ ವಿಚಾರವನ್ನು ತಿಳಿದ ಕದೀಮರು ಸ್ಕೆಚ್ ಹಾಕಿ ಮನೆ ದರೋಡೆ ಮಾಡಿ ಹತ್ಯೆ ಮಾಡಿದ್ದಾರೆ.

ಕಾಫಿ ತೋಟದಲ್ಲಿ ಉತ್ತಮ ಬೆಳೆ ಬಂದಿದ್ದರಿಂದ ಕಾಫಿಯನ್ನು ಇತ್ತೀಚೆಗೆ ಮಾರಾಟ ಮಾಡಲಾಗಿತ್ತಂತೆ. ಆದರೆ ಮೈಸೂರಿನಲ್ಲಿರುವ ಲಲಿತಾ ಅವರ ಮಗ ಕಾಫಿಯಿಂದ ಬಂದ ಹಣವನ್ನು ತೆಗೆದುಕೊಂಡು ಕೇವಲ 50 ಸಾವಿರ ರೂಪಾಯಿಯನ್ನು ಮನೆಯಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಕಾಫಿಯಿಂದ ಬಂದ ದುಡ್ಡು ಇದೆಯೆಂದು ಗೊತ್ತಿರುವವರು ಯಾರೋ ಮಹಿಳೆಯನ್ನು ಹತ್ಯೆ ಮಾಡಿ ಮನೆ ದರೋಡೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮನೆಯಲ್ಲಿದ್ದ 50 ಸಾವಿರ ರೂಪಾಯಿ ನಗದು, ಮನೆಯಲ್ಲಿದ್ದ ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. ಮಹಿಳೆಯು ಪ್ರತೀ ದಿನ ತೋಟದಲ್ಲಿ ಕೆಲಸ ಮಾಡಿ ಬಳಿಕ ಸಂಜೆ ಸ್ನಾನ ಮಾಡಿಯೇ ಮನೆಯೊಳಕ್ಕೆ ಹೋಗುತ್ತಿದ್ದರಂತೆ. ನಿನ್ನೆಯೂ ಕೂಡ ತೋಟದಲ್ಲಿ ಕೆಲಸ ಮಾಡಿ ಬಂದು ಮನೆ ಹಿಂದಿರುವ ಸ್ನಾನದ ಮನೆಯಲ್ಲಿ ನೀರು ಬಿಸಿ ಮಾಡಲು ಹೋದಾಗ ಸ್ನಾನದ ಮನೆಯ ಬಳಿಯೇ ಮಹಿಳೆಯನ್ನು ಹತ್ಯೆ ಮಾಡಿದ್ದಾರೆ.

ಸ್ಥಳಕ್ಕೆ ಕೊಡಗು ಎಸ್ ಪಿ ಕ್ಷಮಾ ಮಿಶ್ರಾ ಮತ್ತು ಮಡಿಕೇರಿ ಡಿವೈಎಸ್‍ಪಿ ದಿನೇಶ್ ಕುಮಾರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಸದ್ಯ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *