ಬೆಂಗಳೂರಿಗೆ ಮತ್ತೆ ಕೊರೊನಾ ಬಾಂಬ್ ಆತಂಕ- ನರ್ಸಿಂಗ್ ಕಾಲೇಜಿನ 40 ವಿದ್ಯಾರ್ಥಿಗಳಿಗೆ ಪಾಸಿಟಿವ್

– ಶಾಲೆ, ವಿದ್ಯಾಗಮ ಆರಂಭಕ್ಕೆ ತಜ್ಞರ ಹಿಂದೇಟು
– ಕೇರಳದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಬೆಂಗಳೂರು: ಬೆಂಗಳೂರಿಗೆ ಮತ್ತೆ ಕೊರೊನಾ ಬಾಂಬ್ ಆತಂಕ ಎದುರಾಗಿದ್ದು, ಮಂಜು ಶ್ರೀ ನರ್ಸಿಂಗ್ ಕಾಲೇಜಿನಲ್ಲಿ 40 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ಆರೋಗ್ಯಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಅಲ್ಲದೆ ಶಾಲೆ ಆರಂಭಕ್ಕೆ ಸಹ ತಜ್ಞರು ಹಿಂದೇಟು ಹಾಕಿದ್ದಾರೆ.

ಬೆಂಗಳೂರಿಗೆ ಕೇರಳ ಶಾಕ್ ಎದುರಾಗಿದ್ದು, ಈಗಾಗಲೇ ಮಂಜುಶ್ರೀ ನರ್ಸಿಂಗ್ ಕಾಲೇಜ್ ನ ಕೇರಳ ವಿದ್ಯಾರ್ಥಿಗಳಲ್ಲಿ 40 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರ ಸಂಪರ್ಕಿತರು ಒಟ್ಟು 200 ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಕೇರಳ ಕೊರೊನಾ ಶಾಕ್ ನಿಂದಾಗಿ ಬಿಬಿಎಂಪಿ ಹೊಸ ರೂಲ್ಸ್ ಮಾಡಿದೆ. ಕೇರಳದ ಭರ್ಜರಿ ಶಾಕ್ ಗೆ ಬಿಬಿಎಂಪಿ ಥಂಡಾ ಹೊಡೆದಿದ್ದು, ಈಗ ಕೇರಳ ಗಡಿ ಬಂದ್ ಮಾಡಲು ಸಾಧ್ಯವಿಲ್ಲದ ಕಾರಣ ಟಫ್ ರೂಲ್ಸ್ ಜಾರಿ ಮಾಡಿದೆ.

ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಕಂಪನಿಗಳ ಸಿಬ್ಬಂದಿ ಯಾರೇ ಬಂದರೂ ನೆಗೆಟಿವ್ ರಿಪೋರ್ಟ್ ಕಡ್ಡಾಯ ಗೊಳಿಸಿದೆ. ರಾಜ್ಯಕ್ಕೆ ಪ್ರವೇಶ ಪಡೆಯುವ 72 ಗಂಟೆಯ ಮೊದಲು ಕೊರೊನಾ ಟೆಸ್ಟ್ ಮಾಡಿಸಿರುವ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದೆ.

ಎರಡನೇ ಅಲೆಯ ಆತಂಕ
ಈಗಾಗಲೇ ಬೆಂಗಳೂರಿನ ಅಪಾರ್ಟ್‍ಮೆಂಟ್ ನಲ್ಲಿ ಪಾರ್ಟಿ ಮಾಡಿದ 28 ಜನರಿಗೆ ಹೈ ಸ್ಪೀಡ್ ನಲ್ಲಿ ಕೊರೋನಾ ಹಬ್ಬಿದೆ. ಹೀಗಾಗಿ ಈ ಕ್ಲಸ್ಟರ್ ಆತಂಕ ಮೂಡಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಗುಪ್ತಗಾಮಿನಿ ಕೊರೊನಾ ಆತಂಕ ಎದುರಾಗಿದೆ. ಅಲ್ಲದೆ ಕೊರೊನಾ ಆತಂಕದ ಹಿನ್ನೆಲೆ 1-5ನೇ ತರಗತಿ ಆರಂಭ ಹಾಗೂ ವಿದ್ಯಾಗಮ ಆರಂಭಕ್ಕೂ ತಜ್ಞ ರಿಂದ ಬೇಡ ಎನ್ನುವ ಉತ್ತರ ಬಂದಿದೆ.

ಶಾಲೆ ಆರಂಭಕ್ಕೆ ಹಿಂದೇಟು
ಕೇರಳ ಸೋಂಕಿತರಿಂದ ತಜ್ಞರ ತಂಡ ಬೆಚ್ಚಿ ಬಿದ್ದಿದ್ದು, ಕೇರಳದಿಂದ ಬಂದವರಲ್ಲೇ ಹೆಚ್ಚು ಮಂದಿಗೆ ಸೋಂಕು ಪತ್ತೆಯಾಗಿದೆ. ಹೀಗಾಗಿ ಶಾಲೆಗಳ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡಿಲ್ಲ. 6, 7ನೇ ತರಗತಿ ಪ್ರಾರಂಭಕ್ಕೆ ತಜ್ಞರ ತಂಡ ಒಪ್ಪಿಗೆ ಸೂಚಿಸಿಲ್ಲ. ಬೆಂಗಳೂರು ಮತ್ತು ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಕೇವಲ 8ನೇ ತರಗತಿ ಆರಂಭಕ್ಕೆ ತಜ್ಞರ ತಂಡ ಒಪ್ಪಿಗೆ ಸೂಚಿಸಿದೆ.

ವಿದ್ಯಾಗಮ ಸಹ ಬಂದ್
ಕೊರೊನಾ ಆತಂಕದ ಹಿನ್ನೆಲೆ ವಿದ್ಯಾಗಮಕ್ಕೂ ತಜ್ಞರ ತಂಡ ರೆಡ್ ಸಿಗ್ನಲ್ ನೀಡಿದೆ. ಶಿಕ್ಷಣ ಇಲಾಖೆ 1-5ನೇ ತರಗತಿ ವಿದ್ಯಾಗಮ ಪ್ರಾರಂಭಕ್ಕೆ ಸಿದ್ಧವಾಗಿತ್ತು. ಕೇರಳದಿಂದ ಬಂದವರಲ್ಲಿ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ವಿದ್ಯಾಗಮಕ್ಕೂ ಬ್ರೇಕ್ ಹಾಕಲಾಗಿದೆ. ಫೆಬ್ರವರಿ 24 ಅಥವಾ 25 ರಂದು ಮತ್ತೆ ಸಭೆ ಸೇರಿ ವಿದ್ಯಾಗಮ ಪ್ರಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

Comments

Leave a Reply

Your email address will not be published. Required fields are marked *