ಹುತಾತ್ಮ ಯೋಧ ಗುರು ಕುಟುಂಬದಲ್ಲಿ ಬಗೆಹರಿಯದ ಕಲಹ

– ಸಮಾಧಿಗೆ ಪತ್ನಿ, ಪೋಷಕರಿಂದ ಪ್ರತ್ಯೇಕ ಪೂಜೆ

ಮಂಡ್ಯ: ಪುಲ್ವಾಮಾ ದಾಳಿ ನಡೆದು ನಾಳೆಗೆ ಎರಡು ವರ್ಷಗಳು ಕಳೆಯುತ್ತಿವೆ. ಈ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಗುಡಿಗೆರೆಯ ಯೋಧ ಗುರು ಅವರು ಸಹ ಹುತಾತ್ಮರಾಗಿದ್ದರು. ಈ ಕಹಿ ಘಟನೆಯನ್ನು ಇಡೀ ದೇಶ ಇಂದಿಗೂ ಸಹ ಮರೆತಿಲ್ಲ.

ಗುರು ಅವರು ಹುತಾತ್ಮರಾದ ಬಳಿಕ, ಗುರು ಅವರ ಕುಟುಂಬಕ್ಕೆ ಸರ್ಕಾರಗಳು, ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗದಿಂದ ಅಪಾರ ಪ್ರಮಾಣದ ಹಣ ಬರಿದು ಬಂದಿದೆ. ಆ ಹಣ ಬಂದಿದ್ದೇ ಏನೋ ಗೊತ್ತಿಲ್ಲ, ಗುರು ಕುಟುಂಬದಲ್ಲಿ ಅಂದು ನಿರ್ಮಾಣವಾದ ಕಲಹ ಇಂದಿಗೂ ಸಹ ನಿಂತಿಲ್ಲ. ಕಳೆದ ವರ್ಷ ಗುರು ಪತ್ನಿ ಹಾಗೂ ಅಪ್ಪ-ಅಮ್ಮ, ತಮ್ಮ ಪ್ರತ್ಯೇಕವಾಗಿ ಗುರು ಸಮಾಧಿಗೆ ಪೂಜೆ ಸಲ್ಲಿಸಿದ್ದರು.

ಈ ವೇಳೆ ಗುರು ಪತ್ನಿ ತನ್ನ ಅತ್ತೆ-ಮಾವ ಹಾಗೂ ಮೈದುನನ ಬಗ್ಗೆ ಆರೋಪಗಳನ್ನು ಮಾಡಿದ್ದರೆ, ಗುರುವಿನ ತಾಯಿಯೂ ಸಹ ಸೊಸೆಯ ಬಗ್ಗೆ ಕೆಲ ಆರೋಪಗಳನ್ನು ಮಾಡುವ ಮೂಲಕ ಗುರು ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಪುಷ್ಟಿ ನೀಡಿದ್ದರು. ಇದೀಗ ನಾಳೆಯೂ ಸಹ ಗುರುವಿನ ಸಮಾಧಿಗೆ, ಗುರು ಹೆಂಡತಿ ಹಾಗೂ ಪೋಷಕರು ಪ್ರತ್ಯೇಕವಾಗಿ ಪೂಜೆ ಸಲ್ಲಿಸಲಿದ್ದಾರೆ. ಈ ಮೂಲಕ ಹುತಾತ್ಮ ಯೋಧ ಗುರು ಅವರ ಕುಟುಂಬದಲ್ಲಿ ಕಲಹ ನಿಂತಿಲ್ಲ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

Comments

Leave a Reply

Your email address will not be published. Required fields are marked *