ಸಾಮಾಜಿಕ ಜಾಲತಾಣ ದುರ್ಬಳಕೆಯಾದರೆ ಕಠಿಣ ಕ್ರಮ: ರವಿಶಂಕರ್‌ ಪ್ರಸಾದ್‌ ಎಚ್ಚರಿಕೆ

ನವದೆಹಲಿ: ಸುಳ್ಳು ಸುದ್ದಿ ಮತ್ತು ಹಿಂಸೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ದುರ್ಬಳಕೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್‌ ಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ.

ಟ್ವಿಟ್ಟರ್‌, ಫೇಸ್‌ಬುಕ್‌, ವಾಟ್ಸಪ್‌, ಲಿಂಕ್ಡ್‌ ಇನ್‌ ಹೆಸರನ್ನು ಪ್ರಸ್ತಾಪಿಸಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಲಕ್ಷಾಂತರ ಜನ ಫಾಲೋವರ್ಸ್‌ ನಿಮಗಿದ್ದಾರೆ. ನೀವು ವ್ಯವಹಾರ ಮಾಡಲು ಸ್ವತಂತ್ರರಾಗಿದ್ದೀರಿ. ಆದರೆ ನೀವು ಭಾರತದ ಸಂವಿಧಾನವನ್ನು ಅನುಸರಿಸಬೇಕು ಎಂದು ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಅವರು, ನಾವು ಸಾಮಾಜಿಕ ಜಾಲತಾಣಗಳನ್ನು ಗೌರವಿಸುತ್ತೇವೆ. ಇವುಗಳಿಂದ ಜನ ಸಾಮಾನ್ಯರಿಗೆ ಅಧಿಕಾರ  ಸಿಕ್ಕಿದೆ. ಡಿಜಿಟಲ್‌ ಇಂಡಿಯಾದಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಪಾತ್ರ ದೊಡ್ಡದು. ಹೀಗಾಗಿ ಸುಳ್ಳು ಸುದ್ದಿ ಮತ್ತು ಹಿಂಸೆಗೆ ಪ್ರಚೋದನೆ ನೀಡಿದರೆ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತರ ಹೋರಾಟದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ 1,300 ಟ್ವಿಟ್ಟರ್‌ ಖಾತೆಗಳನ್ನು ತೆಗೆದು ಹಾಕಬೇಕೆಂದು ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ಸೂಚಿಸಿತ್ತು. ಹೀಗಿದ್ದರೂ ಟ್ವಿಟ್ಟರ್‌ 500 ಖಾತೆಗಳನ್ನು ಮಾತ್ರ ಭಾರತದಲ್ಲಿ ನಿರ್ಬಂಧ ಹೇರಿತ್ತು. ಭಾರತ ಸರ್ಕಾರದ ಆದೇಶವನ್ನು ಟ್ವಿಟ್ಟರ್‌ ಪಾಲಿಸದ್ದಕ್ಕೆ ಟೀಕೆ ವ್ಯಕ್ತವಾಗಿತ್ತು.

Comments

Leave a Reply

Your email address will not be published. Required fields are marked *