ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿದವನನ್ನು ರಾತ್ರಿಯಿಡೀ ಮರಕ್ಕೆ ಕಟ್ಟಿ ಹಾಕಿದ್ರು!

ಯಾದಗಿರಿ: ಕುಡಿದ ಮತ್ತಿನಲ್ಲಿ ನಡುರಾತ್ರಿ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಾಮುಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಅಲ್ಲದೆ ರಾತ್ರಿ ಇಡೀ ಮರಕ್ಕೆ ಕಟ್ಟಿ ಹಾಕಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅದೇ ಗ್ರಾಮದ ಜಿಲಾನಿ ಮಹಿಳೆ ಮನೆಗೆ ನುಗ್ಗಿರೋ ವ್ಯಕ್ತಿ. ನಿನ್ನೆ ತಡ ರಾತ್ರಿ ಕಂಠಪೂರ್ತಿ ಕುಡಿದಿದ್ದ ಜಿಲಾನಿ, ಒಂಟಿಯಾಗಿದ್ದ ಮಹಿಳೆಯ ಮನೆಗೆ ನುಗ್ಗಿದ್ದ. ಜಿಲಾನಿ ಕಂಡ ಮಹಿಳೆ ಚೀರಾಡಾಲು ಆರಂಭಿಸಿದ್ದಾಳೆ. ಮಹಿಳೆ ಚೀರಾಟ ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಜಿಲಾನಿಯನ್ನು ಹಿಡಿದು ಹಗ್ಗದಿಂದ ಕೈಕಾಲು ಕಟ್ಟಿ ಧರ್ಮದೇಟು ನೀಡಿದ್ದಾರೆ. ಬಳಿಕ ರಾತ್ರಿ ಇಡೀ ಮರಕ್ಕೆ ಕಟ್ಟಿ ಹಾಕುವ ಮೂಲಕ ಶಿಕ್ಷೆ ನೀಡಿದ್ದಾರೆ.

ಧರ್ಮದೇಟು ಬೀಳುತ್ತಿದ್ದಂತೆ ತಪ್ಪಾಗಿದೆ ಬಿಟ್ಟು ಬಿಡಿ ಎಂದು ಕಾಮುಕ ಜಿಲಾನಿ ಅಂಗಲಾಚಿದ್ದಾನೆ. ಕಾಮುಕನ ವರ್ತನೆಯಿಂದ ಗ್ರಾಮದ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ. ಹಳ್ಳಿಗಳು ಸುರಕ್ಷಿತ ಅಂದುಕೊಂಡಿರೋ ಜನರಿಗೆ ಈ ಘಟನೆ ಶಾಕ್ ನೀಡಿದೆ.

ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಶಿಕ್ಷಿ ನೀಡಿರೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಹ ಫುಲ್ ವೈರಲ್ ಆಗಿದೆ. ಆದರೆ ಮರ್ಯಾದೆಗೆ ಹೆದರಿರುವ ಮಹಿಳೆ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾಳೆ.

Comments

Leave a Reply

Your email address will not be published. Required fields are marked *