ಹುಣಸೋಡು ಬಳಿ ಸ್ಫೋಟಗೊಂಡ ರಾಸಾಯನಿಕ ಯಾವುದು..?

ಶಿವಮೊಗ್ಗ: ಶಿವಮೊಗ್ಗದ ಹುಣಸೋಡು ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಫೋಟಗೊಂಡ ರಾಸಾಯನಿಕ ವಸ್ತು ಯಾವುದು ಎಂಬ ಪ್ರಶ್ನೆ ಮೂಡಿದೆ. ಸ್ಫೋಟಗೊಂಡಿದ್ದು ಜಿಲೆಟಿನ್ ಕಡ್ಡಿನಾ..? ಡೈನಾಮೇಟಾ..? ಅಥವಾ ಡಿಸಿ ಹೇಳಿದಂತೆ ಜೆಲ್ ಮಾದರಿಯ ಸ್ಫೋಟಕನಾ ಎಂಬ ಅನುಮಾನ ವ್ಯಕ್ತವಾಗಿದೆ.

ಶಿವಮೊಗ್ಗ ಬಿವಿಎಸ್ ಕಲ್ಲು ಕ್ರಷರ್‍ನಲ್ಲಿ ಸ್ಫೋಟಗೊಂಡಿದ್ದು, ಸಾಮಾನ್ಯವಾಗಿ ಬಳಸುವ ಸ್ಫೋಟಕಗಳೇ ಆಗಿವೆಯಂತೆ. ಆಶ್ಚರ್ಯ ಅಂದ್ರೆ ಅಮೋನಿಯಂ ನೈಟ್ರೇಟ್ ಪತ್ತೆಯಾಗಿದ್ದು, ಡಿಟೊನೇಟರ್, ಜಿಲೆಟಿನ್ ಪೌಡರ್, ಬ್ಲ್ಯಾಸ್ಟಿಂಗ್ ಫ್ಯೂಯೆಲ್ ಅಂಶ ಸಿಕ್ಕಿದೆ. ಅಮೋನಿಯಂ ನೈಟ್ರೇಟ್ ಬಳಸಿ ಕಲ್ಲು ಬ್ಲಾಸ್ಟ್ ಮಾಡೋ ಪ್ರಯತ್ನ ಮಾಡಲಾಗಿದೆ. ನಿಯಮ ಉಲ್ಲಂಘಿಸಿ ಮ್ಯಾಗ್ಜಿನ್ ಗಾಡಿಯಲ್ಲಿ ಸ್ಫೋಟಕ ರವಾನೆ ಮಾಡಲಾಗಿದೆ ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ನಿನ್ನೆ ಜಿಲ್ಲಾಧಿಕಾರಿ ಡಿಸಿ ಶಿವಕುಮಾರ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಬೆಂಗಳೂರು ಮತ್ತು ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ಬಂದು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಜೆಲ್ ರೂಪದ ವಸ್ತು ಸ್ಫೋಟಗೊಂಡ ವಿಚಾರ ತಿಳಿದು ಬಂದಿದೆ. ಇದು ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾದ ಮಾಹಿತಿ ಎಂದು ತಿಳಿಸಿದ್ದರು.

ಜೆಲ್ ರೀತಿಯ ಸ್ಫೋಟಕವನ್ನು ವಿದೇಶದಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಈ ಕ್ವಾರಿಗೆ ಸ್ಫೋಟಕ ಬಂದಿದ್ದು ಹೇಗೆ? ಎಲ್ಲಿಂದ ತಂದಿದ್ದಾರೆ? ಇಷ್ಟು ದೊಡ್ಡ ಪ್ರಮಾಣದಲ್ಲಿ ತಂದವರು ಯಾರು? ಎಂಬುದರ ಬಗ್ಗೆ ತನಿಖೆ ನಡೆದಾಗ ಸ್ಪಷ್ಟವಾದ ವಿಚಾರ ಲಭ್ಯವಾಗಲಿದೆ. ಸದ್ಯ ಸ್ಫೋಟದ ಸ್ಥಳದಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಮುಖ್ಯಮಂತ್ರಿಗಳಿಗೆ ಎಲ್ಲ ಮಾಹಿತಿಗಳನ್ನು ನೀಡುತ್ತಿದ್ದೇವೆ. ಅಕ್ರಮ ಕಲ್ಲು ಕ್ವಾರಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *