ಬೆಂಗ್ಳೂರು ಮಂದಿಯೇ ಗಮನಿಸಿ – ಕಾಂಗ್ರೆಸ್ ಪ್ರತಿಭಟನೆಯಿಂದ ಟ್ರಾಫಿಕ್ ಫಿಕ್ಸ್

ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಇಂದು ರಸ್ತೆಗೆ ಇಳಿಯೋ ಮುನ್ನ ಬೀ ಅಲರ್ಟ್. ಇಲ್ಲ ಅಂದ್ರೆ ನಡುರಸ್ತೆಯಲ್ಲೇ ಗಂಟೆಗಟ್ಟಲೆ ಲಾಕ್ ಆಗೋದು ಗ್ಯಾರಂಟಿ.

ಹೌದು, ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು, ರೈತ ಸಂಘಟನೆಗಳು ಇಂದು ರಾಜಭವನ ಚಲೋ ನಡೆಸಲಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಮೆಜೆಸ್ಟಿಕ್ ನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ಈ ರ‍್ಯಾಲಿ ಶುರುವಾಗಲಿದೆ. ಮೆಜೆಸ್ಟಿಕ್‍ನಿಂದ ಫ್ರೀಡಂ ಪಾರ್ಕ್ ಮಾರ್ಗವಾಗಿ ಸಾಗಿ ರಾಜಭವನ ತಲುಪಲಿದೆ. ಕಾಂಗ್ರೆಸ್ ಪಕ್ಷದ ನಾಯಕರು, ರೈತ ಸಂಘಟನೆಗಳು ಸೇರಿದಂತೆ ಹದಿನೈದು ಸಾವಿರಕ್ಕೂ ಹೆಚ್ಚು ಜನರು ಈ ರ‍್ಯಾಲಿಯಲ್ಲಿ ಭಾಗಿಯೋ ಸಾಧ್ಯತೆ ಇದೆ.

ಇಂದಿನ ರಾಜಭವನ ಚಲೋಗೆ ಪೊಲೀಸರು ಕೂಡ ಎಲ್ಲ ರೀತಿಯ ಬಂದೊಬಸ್ತ್ ಮಾಡಿಕೊಂಡಿದ್ದಾರೆ. ಆದರೆ ನಗರದ ಹೃದಯ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರೋದರಿಂದ ಮೆಜೆಸ್ಟಿಕ್ ಸುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಉಂಟಾಗುವ ಸಂಭವ ಇದೆ. ಕೆ.ಜಿ.ರೋಡ್, ಚಿಕ್ಕಪೇಟೆ ಮುಖ್ಯರಸ್ತೆ, ಫ್ರೀಡಂ ಪಾರ್ಕ್ ರಸ್ತೆ, ಚಾಲುಕ್ಯ ಸರ್ಕಲ್, ಮೌರ್ಯ ಸರ್ಕಲ್, ಕೆಆರ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆ ಗಳು ಫುಲ್ ಜಾಮ್ ಆಗುವ ಸಾಧ್ಯತೆಗಳಿವೆ. ಪರಿಸ್ಥಿತಿ ನೋಡಿಕೊಂಡು ಮಾರ್ಗ ಬದಲಾವಣೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಅಂತ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಕಾಂಗ್ರೆಸ್ಸಿನ ರಾಜಭವನ ಚಲೋಗೆ ನೋ ಪರ್ಮಿಷನ್ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ. ರಾಜಭವನ ಚಲೋ ಗೆ ಯಾವುದೇ ರೀತಿಯ ಅನುಮತಿ ಇಲ್ಲ. ಆದರೆ ರ‍್ಯಾಲಿ ಮಾಡುವ ಬಗ್ಗೆ ಅನುಮತಿ ಕೋರಿ ಪತ್ರ ಬಂದಿದ್ದು, ಅದಿನ್ನೂ ಪರಿಶೀಲನೆ ಹಂತದಲ್ಲಿದೆ. ಕೊರೊನಾ ನಿಯಮಗಳು ಇನ್ನೂ ಜಾರಿಯಲ್ಲಿರೋದರಿಂದ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಅಂದ್ರು. ಆದರೆ ವಿಪಕ್ಷಗಳು ರಸ್ತೆಗಿಳಿದಾಗ ಮಾತ್ರ ಕೊರೊನಾ ನಿಯಮಗಳು ಕಾಣುತ್ತವಾ ಎಂಬ ಪ್ರಶ್ನೆ ಎದ್ದಿದೆ.

ಮೊನ್ನೆಯಷ್ಟೇ ಚನ್ನಪಟ್ಟಣದಲ್ಲಿ ನೂತನ ಸಚಿವ ಸಿ.ಪಿ ಯೋಗೇಶ್ವರ್‍ಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಈ ಸಂದರ್ಭದಲ್ಲಿ ಇಲ್ಲದ ಕೊರೊನಾ ನಿಯಮಗಳು ಇಲ್ಯಾಕೆ ಎಂದು ಜನ ಪ್ರಶ್ನೆ ಮಾಡ್ತಿದ್ದಾರೆ. ಇನ್ನು ಸಾವಿರಾರು ಜನರು ರ‍್ಯಾಲಿಯಲ್ಲಿ ಭಾಗವಹಿಸೋದ್ರಿಂದ ಮೆಜೆಸ್ಟಿಕ್, ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳು ಸ್ತಬ್ಧ ಆಗೋ ಸಾಧ್ಯತೆಗಳು ಹೆಚ್ಚಾಗಿದೆ. 10 ಗಂಟೆಯ ನಂತರ ರಸ್ತೆಗಿಳಿದ್ರೆ ಟ್ರಾಫಿಕ್ ನಲ್ಲಿ ಲಾಕ್ ಅಗೋದು ಪಕ್ಕಾ.

Comments

Leave a Reply

Your email address will not be published. Required fields are marked *