ಪಾರ್ಕ್‍ಗೆ ಕರೆದೊಯ್ದು ಜ್ಯೂಸ್‍ನಲ್ಲಿ ಮಾತ್ರೆ ಬೆರೆಸಿ ಮಕ್ಕಳನ್ನೇ ಕೊಲೆಗೈದ ತಾಯಿ!

ಶಿವಮೊಗ್ಗ: ತನ್ನ ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಪಾಪಿ ತಾಯಿಯೊಬ್ಬಳು ತನ್ನದೇ ಇಬ್ಬರು ಮಕ್ಕಳಿಗೆ ಜ್ಯೂಸ್ ನಲ್ಲಿ ವಿಷದ ಮಾತ್ರೆ ಬೆರೆಸಿ ಕೊಲೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಭದ್ರಾವತಿಯ ಸುರಗಿ ತೋಪು ಬಡಾವಣೆ ನಿವಾಸಿ ಗೀತಾ ತನ್ನ ಇಬ್ಬರು ಮಕ್ಕಳಾದ ಅಲೆಕ್ಸ್ ಅಂಥೋಣಿ(8) ಮತ್ತು ಹಲಿನಾ ಅಂಥೋಣಿ(5) ಗೆ ಜ್ಯೂಸ್ ನಲ್ಲಿ ವಿಷಯುಕ್ತ ಮಾತ್ರೆ ನೀಡಿ ಕೊಲೆ ಮಾಡಿದ್ದಾಳೆ. ಅದರಲ್ಲೂ ತನ್ನ ಅನೈತಿಕ ಸಂಬಂಧಕ್ಕೆ ಈ ಮಕ್ಕಳು ಅಡ್ಡಿಯಾಗುತ್ತಿದ್ದಾರೆ ಎಂಬ ಕಾರಣ ನೀಡಿ ಕೊಲೆ ಮಾಡಿದ್ದಾಳೆ ಎಂದು ಹೇಳಲಾಗಿದ್ದು, ಭದ್ರಾವತಿಯಿಂದ ಶಿವಮೊಗ್ಗದ ಗಾಂಧಿ ಪಾರ್ಕ್ ಗೆ ನಿನ್ನೆ ದಿನ ಮಕ್ಕಳನ್ನು ಪಾರ್ಕ್ ತೋರಿಸುವ ನೆಪದಲ್ಲಿ ಕರೆ ತಂದಿದ್ದಾಳೆ.

ಪಾರ್ಕ್ ನಲ್ಲಿ ಜ್ಯೂಸ್ ಕುಡಿಸಿ ತನ್ನದೇ ಮಕ್ಕಳ ಸಾವಿಗೆ ಕಾರಣಳಾಗಿದ್ದಾಳೆ. ಸಂಜೆ ವೇಳೆಗೆ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಧ್ಯರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಬಂದ ಗೀತಾಳ ಈ ಇಬ್ಬರು ಮಕ್ಕಳು ಬದುಕುಳಿಯದೇ ಸಾವೀಗೀಡಾಗಿದ್ದಾರೆ.

ಅಂದಹಾಗೆ ಕಳೆದ 10 ವರ್ಷದ ಹಿಂದೆ ಅಂಥೋಣಿ ಎಂಬವನ ಜೊತೆ ಗೀತಾ ಮದುವೆಯಾಗಿದ್ದಳು. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಗೀತಾಳ ಪತಿ ಅಂಥೋಣಿ ಮೃತಪಟ್ಟಿದ್ದರಂತೆ. ಗಂಡ ಮೃತಪಟ್ಟ ಬಳಿಕ ಗೀತಾ ಅದೇ ಬಡಾವಣೆಯ ಜಾನಿ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳಂತೆ. ಇದೇ ಕಾರಣಕ್ಕೆ ಇದೀಗ ಈ ಮಕ್ಕಳನ್ನು ಸಾಯಿಸಿದ್ದಾಳೆ ಎಂಬ ಆರೋಪ ಮಾಡಲಾಗುತ್ತಿದೆ. ಮಕ್ಕಳಿಗೆ ಇಷ್ಟವಾಗುವ ಮ್ಯಾಂಗೋ ಜ್ಯೂಸ್ ನೀಡಿ ತನ್ನದೇ ಮಕ್ಕಳನ್ನು ಸಾಯಿಸಲು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಕರೆದು ತಂದಿದ್ದಾಳೆ.

ಒಟ್ಟಾರೆ ಇಡೀ ಪ್ರಕರಣದಲ್ಲಿ ಪಾಪಿ ತಾಯಿ ಗೀತಾಳದ್ದೆ ಕುಕೃತ್ಯ ಕಂಡು ಬರುತ್ತಿದ್ದು, ಇದೀಗ ನಗರದ ಕೋಟೆ ಪೊಲೀಸರು ಕೊಲೆ ಮಾಡಿರುವ ಗೀತಾಳ ವಿಚಾರಣೆ ನಡೆಸಿದ್ದಾರೆ. ಅವಳ ಮೊಬೈಲ್ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಜಾನಿ ಹಾಗೂ ಗಾಂಧಿ ಪಾರ್ಕಿನ ಸಿಸಿಟಿವಿ ಪರಿಶೀಲನೆ ನಡೆಸಿದರೆ ಅಸಲಿಯತ್ತು ಹೊರಬರಲಿದೆ. ಮುದ್ದಾಗಿರುವ ಎರಡು ಮಕ್ಕಳನ್ನು ತನ್ನ ತೆವಲಿಗೆ ಸಾಯಿಸಿರುವ ಪಾಪಿ ತಾಯಿಗೆ ಕಠಿಣ ಶಿಕ್ಷೆಯಾಗಬೇಕೆಂಬುದೇ ಶಿವಮೊಗ್ಗ ಜನರ ಒತ್ತಾಯವಾಗಿದೆ.

Comments

Leave a Reply

Your email address will not be published. Required fields are marked *