ಪತ್ನಿಯನ್ನು ಕಾಡಿಗೆ ಕರೆದೊಯ್ದು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಪತಿ ಅರೆಸ್ಟ್

ಕಾರವಾರ: ಪತ್ನಿ ಮೇಲಿನ ಸಿಟ್ಟಿನಿಂದ ಆಕೆಯನ್ನು ಕಾಡಿಗೆ ಕರೆದೊಯ್ದು ಹತ್ಯೆ ಮಾಡಲು ಯತ್ನಿಸಿದ ಕಿರಾತಕ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಮೇಶ್ ದೇಸಾಯಿ ಎಂದು ಗುರುತಿಸಲಾಗಿದ್ದು, ಈತ ಗೋಯರ ಗ್ರಾಮದ ನಿವಾಸಿ. ಘಟನೆಯಿಂದ ಪತ್ನಿ ರಸಿಕಾ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಡೆದಿದ್ದೇನು..?
ಪತ್ನಿ ಶೀಲ ಶಂಕಿಸಿ ಇಬ್ಬರ ಮಧ್ಯೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಇದೇ ಸಿಟ್ಟಿನಿಂದ ರಮೇಶ್ ಡಿಸೆಂಬರ್ 4ರಂದು ಪತ್ನಿಯನ್ನು ಕಾಡಿಗೆ ಕರೆದೊಯ್ದಿದ್ದಾನೆ. ಅಲ್ಲದೆ ಆಕೆಯ ಮೇಲೆ ಕೋವಿಯಿಂದ ಗುಂಡು ಹಾರಿಸಿದ್ದಾನೆ. ಪರಿಣಾಮ ರಸಿಕಾ ಭುಜ ಹಾಗೂ ಕಿಬ್ಬೊಟ್ಟೆಗೆ ಗಾಯಗಳಾಗಿವೆ.

ಗಾಯಗೊಂಡ ಪತ್ನಿಯನ್ನು ಸ್ವತಃ ರಮೇಶನೇ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದಾನೆ. ಕಟ್ಟಿಗೆ ತೆರಲು ಕಡಿಗೆ ಹೋದಾಗ ಅಪರಿಚಿತ ಬೇಟೆಗಾರರು ಪತ್ನಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕಥೆ ಕಟ್ಟಿದ್ದನು. ಅಲ್ಲದೆ ಕದ್ರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಿಸಿದ್ದನು.

ದೂರು ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಗಾಯಾಳು ರಸಿಕಾಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ತನ್ನ ಗಂಡನೇ ಕೃತ್ಯ ಎಸಗಿರುವುದಾಗಿ ಬಹಿರಂಗಪಡಿಸಿದ್ದಾರೆ. ಸದ್ಯ ಪೊಲೀಸರನ್ನು ರಮೇಶ್ ನನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *