ಡಿಜೆ, ಕೆಜಿ ಹಳ್ಳಿ ಗಲಭೆ ಪ್ರಕರಣ- ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧನ

ಬೆಂಗಳೂರು: ಡಿಜೆ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಾಜಿ ಕಾರ್ಪೊರೇಟರ್ ಜಾಕೀರ್ ನನ್ನು ತಡರಾತ್ರಿ ಬಂಧಿಸಿದ್ದಾರೆ.

ಮಾಜಿ ಕಾರ್ಪೋರೇಟರ್ ಸಂಪತ್ ರಾಜ್ ಸಹ ಇದೇ ಪ್ರಕರಣದಲ್ಲಿ ಬಂಧಿತನಾಗಿದ್ದು, ಶಾಸಕ ಆಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದ ಪ್ರಕರಣದಲ್ಲಿ ಜಾಕೀರ್ ಸಹ ಎಸ್ಕೇಪ್ ಆಗಿದ್ದ. ಆದರೆ ತನಿಖೆ ಮುಂದುವರಿಸಿದ್ದ ಸಿಸಿಬಿ ಪೊಲೀಸರು, ತಡರಾತ್ರಿ ಜಾಕೀರ್‍ನನ್ನು ಬಂಧಿಸಿದ್ದಾರೆ. ಸಂಪತ್ ರಾಜ್, ಆರುಣ್ ಸೇರಿದಂತೆ ಕೆಲ ಕಿಡಿಗೇಡಿಗಳ ಜೊತೆಗೆ ಸೇರಿ ಶಾಸಕರ ಮನೆಗೆ ಬೆಂಕಿ ಹಾಕಲು ಜಾಕೀರ್ ಉತ್ತೇಜಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣದಲ್ಲಿ ಸಂಪತ್ ರಾಜ್ ಜೊತೆಗೆ ತನ್ನ ಹೆಸರೂ ಕೇಳಿ ಬರುತ್ತಿದ್ದಂತೆ ಜಾಕೀರ್ ನಾಪತ್ತೆಯಾಗಿದ್ದ. ಕಳೆದ ಮೂರು ತಿಂಗಳಿನಿಂದ ಸಿಸಿಬಿ ಪೊಲೀಸರು ಜಾಕೀರ್ ಬೆನ್ನು ಬಿದ್ದಿದ್ದರು. ಆದರೆ ಸುಳಿವು ಸಿಕ್ಕಿರಲಿಲ್ಲ. ಇದೀಗ ತಡರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಇತ್ತ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಜಾಮೀನು ಅರ್ಜಿ ವಜಾಗೊಂಡಿದೆ. ಸಿಟಿ ಸಿವಿಲ್ ಕೋರ್ಟ್ ಗೆ ಜಾಮೀನು ನೀಡುವಂತೆ ಸಂಪತ್ ರಾಜ್ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನ ವಜಾಗೊಳಿಸಿ ಆದೇಶಿಸಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಸಂಪತ್ ರಾಜ್‍ಗೆ ಪರಪ್ಪನ ಅಗ್ರಹಾರದ ಬಾಗಿಲುಗಳು ತೆರೆದಿಲ್ಲ. ಜಾಮೀನಿಗಾಗಿ ಸಂಪತ್ ರಾಜ್ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ.

ಈ ಹಿಂದೆ ಕೊರೊನಾ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಂಪತ್ ರಾಜ್ ಎಸ್ಕೇಪ್ ಆಗಿದ್ದರು. ತದನಂತರ ನವೆಂಬರ್ 16ರಂದು ಸಿಸಿಬಿ ಪೊಲೀಸರು ಸಂಪತ್ ರಾಜ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದ ನ್ಯಾಯಾಲಯ ನಂತರ ನ್ಯಾಯಂಗ ಬಂಧನಕ್ಕೆ ನೀಡಿತ್ತು.

Comments

Leave a Reply

Your email address will not be published. Required fields are marked *