ಬಿಜೆಪಿ ಸರ್ಕಾರ ಬಂದಾಗಲೆಲ್ಲ ಅಶಕ್ತರೇ ಮಂತ್ರಿಯಾಗಿದ್ದಾರೆ: ಅಪ್ಪಚ್ಚು ರಂಜನ್

– ಅಶಕ್ತರನ್ನು ಕೈ ಬಿಟ್ಟು ನಮ್ಮನ್ನು ಮಂತ್ರಿ ಮಾಡಲಿ

ಮಡಿಕೇರಿ: ನಮ್ಮ ಸರ್ಕಾರ ರಚನೆಯಾದಗಲೆಲ್ಲ ಅವರೇ ಮಂತ್ರಿಗಳಾಗಿದ್ದಾರೆ. ಜೊತೆಗೆ ಕೆಲಸ ಮಾಡದ ಅಶಕ್ತ ಸಚಿವರು ಇದ್ದಾರೆ. ಅಂತಹವರನ್ನು ಕೈಬಿಟ್ಟು ನಮಗೆ ಸಚಿವ ಸ್ಥಾನ ಕೊಡಲಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ನಾಲ್ಕೈದು ಬಾರಿ ಸಚಿವರಾದವರೇ ಮತ್ತೆ ಸಚಿವರಾಗಿದ್ದಾರೆ. ಈಗಿರುವ ಕ್ಯಾಬಿನೆಟ್ ನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಸಚಿವರೂ ಇದ್ದಾರೆ. ಅಂತಹವರನ್ನು ಕೈಬಿಡಲಿ. ಉಮೇಶ್ ಕತ್ತಿ ಸೇರಿದಂತೆ ನಾನೂ ಐದು ಬಾರಿ ಶಾಸಕನಾಗಿದ್ದೇನೆ. ನಮಗೂ ಸಚಿವ ಸ್ಥಾನ ನೀಡಲಿ. ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮೆಲ್ಲರ ಆಗ್ರಹ. ಪಕ್ಷವೂ ಕೂಡ ಹಿರಿಯ ಶಾಸಕರಿಗೆ ಮತ್ತು ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.

ಹೈಕಮಾಂಡ್ ಕೂಡ ಇದೇ ಅಭಿಪ್ರಾಯ ಹೊಂದಿರುವುದರಿಂದ ಸಚಿವ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ. ರಾಜ್ಯ ಮುಖಂಡರು ಸಚಿವಸ್ಥಾನಕ್ಕೆ ಮಾಡುವ ಪಟ್ಟಿಯನ್ನು ಹೈಕಮಾಂಡ್ ಪರಿಗಣಿಸುವುದಿಲ್ಲ. ಈಗಾಗಲೇ ಹಲವು ಚುನಾವಣೆಗಳಲ್ಲಿ ಟಿಕೆಟ್ ನೀಡಿರುವುದನ್ನು ನೀವು ಗಮನಿಸಿದರೆ ಅದೆಲ್ಲವೂ ಗೊತ್ತಾಗುತ್ತದೆ. ಹೀಗಾಗಿ ಹೈಕಮಾಂಡ್ ಮೂಲ ಬಿಜೆಪಿ ಶಾಸಕರನ್ನು ಕೈಬಿಡದೆ ಪರಿಗಣಿಸುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯೋ ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಆದರೆ ವಿಸ್ತರಣೆ ಮಾಡಿದರೂ ಸರಿ, ಪುನರ್ ರಚನೆ ಮಾಡಿದರೂ ಸರಿ ಮೂಲ ಮತ್ತು ಹಿರಿಯ ಬಿಜೆಪಿ ಶಾಸಕರನ್ನು ಪಕ್ಷವು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಮರಾಠ ಅಭಿವೃದ್ಧಿ ನಿಗಮ ರಚನೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಸಮುದಾಯಗಳಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಹಾಗೆಂದು ಜಾತಿಗೊಂದು ನಿಗಮ ಮಾಡುವುದಕ್ಕಿಂತ ಸಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗಾಗಿ ಅಭಿವೃದ್ಧಿ ನಿಗಮ ಮಾಡುವುದು ಒಳಿತು. ಆ ಮೂಲಕ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ನಿಗಮಗಳು ಸ್ಥಾಪನೆಯಾಗುವುದು ಒಳ್ಳೆಯದು ಎಂದರು.

Comments

Leave a Reply

Your email address will not be published. Required fields are marked *