ಹಲವಾರು ಸಂಘಟನೆಗಳ ಬೆಂಬಲ – ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್

ಬೆಂಗಳೂರು: ಇಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡುವ ವಿಚಾರವಾಗಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡುವುದಾಗಿ ತಿಳಿಸಿದ್ದಾರೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಸರ್ಕಾರದ ತೀರ್ಮಾನಕ್ಕೆ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆಯೇ ಇದರ ವಿರುದ್ಧ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಪರ ಸಂಘಟನೆಗಳು ಹೇಳಿಕೊಂಡಿದ್ದವು. ಈ ವಿಚಾರವಾಗಿ ಇಂದು ಸಭೆ ನಡೆಸಿದ್ದು, ಈ ಸಭೆಯಲ್ಲಿ ಕರ್ನಾಟಕ ಬಂದ್‍ಗೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿವೆ.

ಇಂದು ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಸಭೆ ಸೇರಿದ್ದ ಹಲವಾರು ಸಂಘಟನೆಗಳ ಮುಖಂಡರು ಡಿಸೆಂಬರ್ 5ರಂದು ನಡೆಯುವ ಬಂದ್‍ಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ವಿವಿಧ ಕನ್ನಡಪರ ಸಂಘಟನೆಗಳು, ಓಲಾ, ಊಬರ್ ಅಸೋಸಿಯೇಷನ್, ಆಟೋ ಅಸೋಸಿಯೇಷನ್ ಮತ್ತು ಸ್ಕೂಲ್ ವ್ಯಾನ್ ಅಸೋಸಿಯೇಷನ್ ಬಂದ್‍ಗೆ ಬೆಂಬಲ ನೀಡಿವೆ. ಜೊತೆಗೆ ಬಂದ್ ದಿನ 5 ಲಕ್ಷ ಜನರು ಬೆಂಗಳೂರಿನಲ್ಲಿ ಮೆರವಣಿಗೆ ನಡೆಸುವ ಸಿದ್ಧತೆ ಮಾಡಿಕೊಂಡಿದ್ದಾರೆ. ಬಸ್‍ಗಳನ್ನು ಓಡಾಡಲು ಬಿಡುವುದಿಲ್ಲ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಇಂದು ನಡೆದ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಫಿಲ್ಮ್ ಚೇಂಬರ್ ನ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು, ಕರವೇ ಅಧ್ಯಕ್ಷ ಶಿವರಾಮೇಗೌಡ, ಮಂಜುನಾಥ್ ದೇವ, ಗಿರೀಶ್ ಗೌಡ, ಪಾಲನೇತ್ರ, ಟಿ.ಪಿ ಪ್ರಸನ್ನಕುಮಾರ್, ಅಮ್ಮಿಚಂದ್ರು, ನಾರಾಯಣ ಸ್ವಾಮಿ, ವಾಟಾಳ್ ವೆಂಕಟೇಶ್, ನರಸಿಂಹ ಮೂರ್ತಿ, ಮುಭಾರಕ್ ಪಾಷಾ, ಸಾಧಿಕ್ ಪಾಷಾ, ಬಾಲಾಜಿ ತಿಮ್ಲಾಪುರ, ಕೊಪ್ಪಳ ವಿಜಯ್, ಸಯ್ಯದ್ ಜಿಲಾನಿ ಪಾಷಾ, ಎರ್ರಿಸ್ವಾಮಿ, ಮುನ್ನಾವರ, ಪಾರ್ಥಸಾರಥಿ, ಬಾಲಾಜಿ ಕೃಷ್ಣಮೂರ್ತಿ, ವೇಣುಗೋಪಾಲ್, ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರೆಲ್ಲರು ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *