2ನೇ ದಿನವೂ ಕಾಲೇಜ್ ಆರಂಭಕ್ಕೆ ನೀರಸ ಪ್ರತಿಕ್ರಿಯೆ

ಬೆಂಗಳೂರು: ಪದವಿ ಕಾಲೇಜು ಪ್ರಾರಂಭದ ಎರಡನೇ ದಿನವೂ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಎರಡನೇ ದಿನವಾದ ಇಂದು ಕೂಡಾ ವಿದ್ಯಾರ್ಥಿಗಳು ಕಾಲೇಜಿಗೆ ಬರೋದಕ್ಕೆ ಹಿಂದೇಟು ಹಾಕಿದ್ದಾರೆ. ಮೊದಲ ದಿನಕ್ಕೆ ಹೋಲಿಸಿದ್ರೆ ಸ್ವಲ್ಪ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ.

ಕೊರೊನಾ ನಡುವೆಯೂ ಎರಡನೇ ದಿನ ಕಡಿಮೆ ವಿದ್ಯಾರ್ಥಿಗಳಿಗೆ ಬಹುತೇಕ ಕಾಲೇಜುಗಳಲ್ಲಿ ತರಗತಿ ನಡೀತು. ಮಹಾರಾಣಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ನಿನ್ನೆಗಿಂತ ಇಂದು ಹೆಚ್ಚು ವಿದ್ಯಾರ್ಥಿನಿಯರು ಆಗಮಿಸಿದ್ದರು. ಸರ್ಕಾರದ ಮಾರ್ಗಸೂಚಿಯಂತೆ ಕಾಲೇಜಿನಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ವ್ಯವಸ್ಥೆ, ಸಾಮಾಜಿಕ ಅಂತರಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳು ಖುಷಿಯಿಂದಲೇ ಪಾಠ ಕೇಳಿದರು.

ಇವತ್ತೂ ಕೂಡ ಅನೇಕ ವಿದ್ಯಾರ್ಥಿಗಳು ಕೊರೋನಾ ಟೆಸ್ಟ್ ಮಾಡಿಸದೇ ಕಾಲೇಜಿಗೆ ಬಂದಿದ್ದರು. ಹೀಗಾಗಿ ಮಹಾರಾಣಿ ಕಾಲೇಜಿನಲ್ಲಿ ಬಿಬಿಎಂಪಿ ವತಿಯಿಂದ ಉಚಿತ ಆಂಟಿಜೆನ್ ಟೆಸ್ಟ್ ಹಾಗೂ ಆರ್ ಟಿ ಪಿಸಿಆರ್ ಟೆಸ್ಟ್ ಮಾಡಿಸಲಾಯಿತು. ರಾಜಾಜಿನಗರದ ವಿವೇಕಾನಂದ ಕಾಲೇಜಿನಲ್ಲಿ ನಿನ್ನೆ ಕೇವಲ 8 ರಿಂದ 10 ಜನ ಬಂದಿದ್ದರು. ಇಂದು 25 ರಿಂದ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಎರಡನೇ ದಿನಕ್ಕೆ ವಿದ್ಯಾರ್ಥಿ ಸಂಖ್ಯೆಯಲ್ಲಿ ಏರಿಕೆಯಾಗಿದ್ದನ್ನು ಕಂಡು ಉಪನ್ಯಾಸಕರು ಸಂತೋಷಗೊಂಡರು.

ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂದೂ ಕೂಡಾ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಒಟ್ಟಾರೆ ಎರಡನೇ ದಿನದ ಕಾಲೇಜ್ ಪ್ರಾರಂಭಕ್ಕೆ ನೀರಸ ಪ್ರತಿಕ್ರಿಯೆ ಅನ್ನಿಸಿದ್ರು, ಮೊದಲ ದಿನಕ್ಕಿಂತ ಉತ್ತಮ ಪ್ರತಿಕ್ರಿಯೆ ಸಿಕ್ತು. ದಿನ ಕಳೆದಂತೆ ಮತ್ತಷ್ಟು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಆಗೋ ಸಾಧ್ಯತೆಯೂ ಇದೆ.

Comments

Leave a Reply

Your email address will not be published. Required fields are marked *