ಈ ದಿನ ಕಾಂಗ್ರೆಸ್ ಆಡಳಿತದಲ್ಲಿ ಕೊಲೆಯಾದ ಕುಟ್ಟಪ್ಪರಿಗೆ ಗೆಲುವು ಅರ್ಪಣೆ – ಸಿಟಿ ರವಿ

ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತರಿಗೆ ಉಪಚುನಾವಣೆಯ ಗೆಲುವನ್ನು ಅರ್ಪಣೆ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಟ್ವೀಟ್ ಮಾಡಿದ್ದಾರೆ.

ಶಿರಾ ಮತ್ತು ಆರ್‍ಆರ್ ನಗರ ಉಪಚುನಾವಣೆಯ ಫಲಿತಾಂಶದಲ್ಲಿ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಪಕ್ಷ ಜಯಭೇರಿ ಭಾರಿಸಿದೆ. ಈ ಗೆಲುವನ್ನು ಸಿಟಿ ರವಿಯವರು ಐದು ವರ್ಷದ ಹಿಂದೆ ಕೊಲೆಯಾದ ವಿಶ್ವ ಹಿಂದೂ ಪರಿಷತ್‍ನ (ವಿಪಿಹೆಚ್) ನಾಯಕ ಕುಟ್ಟಪ್ಪ ಮತ್ತು ಹಲವು ಹಿಂದೂ ಕಾರ್ಯಕರ್ತರಿಗೆ ಅರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಿಟಿ ರವಿಯವರು, ಐದು ವರ್ಷದ ಹಿಂದೆ ಇದೇ ದಿನದಲ್ಲಿ ಕಾಂಗ್ರೆಸ್ ಪ್ರಾಯೋಜಿತ ಟಿಪ್ಪು ಜಯಂತಿಯ ಆಚರಣೆ ವೇಳೆ ಇಸ್ಲಾಮಿಕ್ ಮೂಲವಾದಿಗಳಿಂದ ವಿಪಿಹೆಚ್ ನಾಯಕ ಕುಟ್ಟಪ್ಪ ಕೊಲ್ಲಲ್ಪಟ್ಟಿದ್ದರು. ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪಚುನಾವಣೆಯ ಗೆಲುವನ್ನು ನಾವು ಕುಟ್ಟಪ್ಪ ಮತ್ತು ಕಾಂಗ್ರೆಸ್ ಆಡಳಿತದ ವೇಳೆ ಕೊಲೆಯಾದ ಹಲವಾರು ಹಿಂದೂ ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಶಿರಾ ಮತ್ತು ಆರ್‍ಆರ್ ನಗರದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಆರ್.ಆರ್. ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 57,936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಿರಾ ಕ್ಷೇತ್ರದಲ್ಲೂ ಕೂಡ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಗೆದ್ದು ಬೀಗಿ ಇತಿಹಾಸ ಸೃಷ್ಟಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಗೆ ರಾಜ್ಯಾದ್ಯಂತ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿತ್ತು. ಇದರ ನಡುವೆಯೇ ಸಿದ್ದರಾಮಯ್ಯನವರು ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಈ ವೇಳೆ 2015ರ ನವೆಂಬರ್ 10ರಂದು ಮಡಿಕೇರಿಯಲ್ಲಿ ಟಿಪ್ಪು ಜಯಂತಿಯಂದು ನಡೆದ ಘರ್ಷಣೆಯ ವೇಳೆ ಕುಟ್ಟಪ್ಪ ಮೃತಪಟ್ಟಿದ್ದರು.

Comments

Leave a Reply

Your email address will not be published. Required fields are marked *