ವಿನಯ್ ಕುಲಕರ್ಣಿ ಬಂಧನಕ್ಕೆ ಪ್ರಹ್ಲಾದ್ ಜೋಶಿ ಒತ್ತಡವೇ ಕಾರಣ: ಸಿದ್ದು ಆರೋಪ

ಶಿವಮೊಗ್ಗ: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಒತ್ತಡವೇ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ. ಅವರ ಬಂಧನದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಡವಿದೆ. ವಿನಯ್ ಕುಲಕರ್ಣಿ ಪ್ರಹ್ಲಾದ್ ಜೋಶಿ ವಿರುದ್ಧ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ ಬಂಧನಕ್ಕೆ ಕಾರಣ ಎಂದು ಆರೋಪಿಸಿದರು.

ಸರ್ಕಾರ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದ ವೇಳೆ ವಿನಯ್ ಕುಲಕರ್ಣಿ ಹೆಸರಿರಲಿಲ್ಲ. ಆದರೆ ಸಿಬಿಐನವರು ತನಿಖೆ ನಡೆಸಿದಾಗ ಕುಲಕರ್ಣಿ ಹೆಸರು ಕೇಳಿ ಬಂದಿದೆ. ಇದೊಂದು ಬೆದರಿಕೆ ತಂತ್ರವಾಗಿದ್ದು, ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದರು.

ಶಿರಾ ಹಾಗೂ ಆರ್ ಆರ್ ಉಪ ಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಹೇಳಿದ್ದಾರೆ. ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ನಾನು ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಈ ವೇಳೆ ಜನರ ಒಲವು ಕಾಂಗ್ರೆಸ್ ಪರ ಇದ್ದಿದ್ದನ್ನು ಗಮನಿಸಿದೆ. ನಾವು ಜನರ ಬಳಿಗೆ ಹೋಗಿ ಪ್ರಚಾರ ನಡೆಸಿದ್ದೇವೆ. ಆದರೆ ಬಿಜೆಪಿಯವರು ಪ್ರಚಾರಕ್ಕಿಂತಲೂ ದುಡ್ಡು ಕೊಟ್ಟು ಚುನಾವಣೆ ನಡೆಸಿದ್ದಾರೆ ಎಂದರು.

ಬಿಹಾರ ಚುನಾವಣೆ ಎಲ್ಲರೂ ಊಹಿಸಿದ್ದಂತೆಯೇ ಆಗಲಿದೆ. ಬಿಹಾರದ ನಾಗರೀಕರು, ಯುವಕರು ಈ ಬಾರಿ ಮೋದಿ ಸರಕಾರದ ವಿರುದ್ಧ ಇದ್ದಾರೆ. ಬಿಹಾರದ ಜನ ಬದಲಾವಣೆ ಬಯಸಿದ್ದಾರೆ. ಯುವಕರು ಮೋದಿ ಸರಕಾರದ ವಿರುದ್ಧ ಭ್ರಮನಿರಸಗೊಂಡಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *