ಉಡುಪಿ ರೌಡಿಶೀಟರ್ ಸೈಫ್ ಮೇಲೆ ತಲ್ವಾರ್ ದಾಳಿ ಯತ್ನ

ಉಡುಪಿ: ಜಿಲ್ಲೆಯ ರೌಡಿಶೀಟರ್ ಸೈಫುದ್ದೀನ್ ಮೇಲೆ ದುಷ್ಕರ್ಮಿಗಳು ಕೊಲೆ ಯತ್ನಕ್ಕೆ ಮುಂದಾಗಿದ್ದಾರೆ. ಡಸ್ಟರ್ ಕಾರ್ ನಿಂದ ಇಳಿದು ತಲವಾರು ತೋರಿಸಿದ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಸೈಫ್ ಭಾಗಿಯಾಗಿದ್ದ. ಇದೀಗ ಈತನ ಕೊಲೆಗೆ ದುಷ್ಕರ್ಮಿಗಳು ಮುಂದಾಗಿದ್ದರು. ಆದರೆ ಕಚೇರಿಯಲ್ಲಿ ಸೈಫ್‍ನ ಸಹವರ್ತಿಗಳು ಇದ್ದ ಕಾರಣ, ಕೊಲೆಯ ಯತ್ನ ವಿಫಲವಾಗಿದೆ.

ಕಂದು ಬಣ್ಣದ ಡಸ್ಟರ್ ಕಾರಿನಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ತಲವಾರಿನೊಂದಿಗೆ ಬಂದಿದ್ದರು. ಸೈಫುದ್ದೀನ್ ಕರಾವಳಿ ಭಾಗದಲ್ಲಿ ಎಕೆಎಂಎಸ್ ಹೆಸರಿನ ಖಾಸಗಿ ಬಸ್ ಕಂಪೆನಿ ನಡೆಸಿಕೊಂಡಿದ್ದಾನೆ. ಸೈಫುದ್ದೀನ್ ಕಳೆದ ಫೆಬ್ರವರಿ ತಿಂಗಳಲ್ಲಿ ಮುಂಬೈನ ಬಾರ್ ಮಾಲೀಕ ವಶಿಷ್ಟ ಯಾದವ್ ಎಂಬಾತನನ್ನ ಉಡುಪಿಗೆ ಕರೆಸಿ ಕೊಲೆ ಮಾಡಿಸಿದ್ದ. ಈ ಕೇಸಲ್ಲಿ ಅಂದರ್ ಆದವ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ.

ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾದ ನಂತರ ಪೊಲೀಸರು ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ನಾಕಬಂದಿ ಹಾಕಿದ್ದಾರೆ. ಕಚೇರಿಯ ಸಿಸಿಟಿವಿ ಫುಟೇಜ್ ಗಳನ್ನು ವಶಪಡಿಸಿಕೊಂಡು, ದುಷ್ಕರ್ಮಿಗಳ ತಂಡ ಯಾವ ಕಡೆ ಎಸ್ಕೇಪ್ ಆಗಿದೆ ಎನ್ನುವ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *