ನಮ್ಮ ಬಗ್ಗೆ ಮಾತಾಡಿದವರಿಗೆ ಪ್ರಮೋಷನ್ ಸಿಗಲಿ: ಡಿಕೆಶಿ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ನನ್ನ ಬಗ್ಗೆ ಮಾತನಾಡಿದವರಿಗೆ ಬೇಗ ಒಳ್ಳೆಯ ಪ್ರಮೋಷನ್ ಸಿಗಲಿ ಎಂದು ಹೇಳುವ ಮೂಲಕ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಬಹಳ ಸಂತೋಷ, ಇಷ್ಟು ಬೇಗ ಸಂತೋಷವಾದ ಸುದ್ದಿ ಹೇಳಿದ್ದಾರೆ. ನನ್ನ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದರೆ ಮಾಧ್ಯಮದಲ್ಲಿ ಬೆಲೆ ಇದೆ. ನಮ್ಮ ಬಗ್ಗೆ ಮಾತಾಡಿದರೆ ಅವರಿಗೆ ಪ್ರಮೋಷನ್ ಸಿಗುತ್ತೆ ಮತ್ತು ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಸೋಮಶೇಖರ್, ಸಾಮ್ರಾಟ್ ಅಶೋಕ್, ಸಿ ಟಿ ರವಿ, ಸರ್ವಿಸ್ ಪ್ರವೈಡರ್ ಆಶ್ವಥ್ ಎಲ್ಲ ಮಾತನಾಡ್ತಾ ಇದಾರಲ್ಲ. ಮಾತನಾಡಲಿ ಏನೇನಿದೆಯೋ ಹುಡುಕಾಡಲಿ ಎಂದು ಬಿಜೆಪಿ ನಾಯಕರ ವಿರುದ್ಧ ಮಾತಿನ ಚಾಟಿ ಬೀಸಿದರು.

ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಈಗ ಅಪ್ರಸ್ತುತವಾಗಿದ್ದು, ನಾವೆಲ್ಲ ಶಾಸಕಾಂಗ ಪಕ್ಷದ ನಾಯಕರ ಜೊತೆ ಇದ್ದೇವೆ. ಮುಂದಿನ ಚುನಾವಣೆಯಲ್ಲಿ ಬಹುಮತ ಬರಲಿ, ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲಿ. ಆ ವೇಳೆ ಹೈಕಮಾಂಡ್ ಸಿಎಂ ಯಾರೆಂದು ನಿರ್ಧರಿಸುತ್ತದೆ. ಕೋಳಿವಾಡ ಶಿಸ್ತುಪಾಲನೆ ಬಗ್ಗೆ ಹೇಳಿದ್ದಾರೆ. ನಾನು ಕೊಟ್ಟ ಜವಬ್ದಾರಿಯನ್ನ ಅವರು ನಿರ್ವಹಿಸುತ್ತಿದ್ದಾರೆ. ನಾನು ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಜೊತೆ ಇದ್ದೇವೆ. ಅವರು ನಮ್ಮ ಶಾಸಕಾಂಗ ಪಕ್ಷದ ನಾಯಕರು ಎಂದು ಹೇಳಿ ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದರು.

ಎಸ್.ಟಿ.ಸೋಮಶೇಖರ್ ಹೇಳಿದ್ದೇನು?: ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಮುನಿರತ್ನ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ. ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಡಿಕೆಶಿ ಮಾತಿಗೆ ಸಿದ್ದರಾಮಯ್ಯ ಅವರೇ ಬೆಲೆ ಕೊಡುವುದಿಲ್ಲ. ನಾವು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದೇವು. ನಮ್ಮನ್ನು ಪಕ್ಷ ಬಿಡಿಸಿದವರು ಯಾರು? ಶೇ.99 ರಷ್ಟು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದು, ಹೊರಗಡೆಯಿಂದ ಕರೆದುಕೊಂಡು ಬಂದು ಚುನಾವಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *