ಸುರೇಶ್ ಅಂಗಡಿ ಬದುಕಿದ್ರೆ ದೊಡ್ಡ ಹುದ್ದೆ ಸಿಗುತ್ತಿತ್ತು: ರಮೇಶ್ ಜಾರಕಿಹೊಳಿ ಬಾಂಬ್

ಬೆಳಗಾವಿ: ಕೊರೊನಾದಿಂದ ನಿಧನರಾದ ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಬದುಕಿದ್ರೆ ಅವರಿಗೆ ದೊಡ್ಡ ಹುದ್ದೆ ಸಿಗುತ್ತಿತ್ತು ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜಾರಕಿಹೊಳಿ ಹೇಳಿಕೆ ಬೆನ್ನಲ್ಲೆ ಕೆಲ ದಿನಗಳ ಹಿಂದೆ ಸಿಎಂ ಸ್ಥಾನ ಬದಲಾವಣೆ ಮಾತುಗಳು ಸತ್ಯನಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ದೇವರು ಒಳ್ಳೆಯವರನ್ನ ಬೇಗ ಕರೆದುಕೊಳ್ಳುತ್ತಾನೆ. ಸುರೇಶ್ ಅಂಗಡಿ ಎರಡ್ಮೂರು ತಿಂಗಳು ಬದುಕಿದ್ರೆ ಅವರಿಗೆ ದೊಡ್ಡ ಭವಿಷ್ಯವಿತ್ತು. ಸುರೇಶ್ ಅಂಗಡಿಯವರಿಗೆ ಎರಡ್ಮೂರು ತಿಂಗಳಲ್ಲಿ ಒಂದು ವಿಶೇಷ ಹುದ್ದೆ ಸಿಗುತ್ತಿತ್ತು. ಆದ್ರೆ ದುರ್ದೈವ ನಮ್ಮನ್ನಗಲಿದರು. ಸುರೇಶ್ ಅಂಗಡಿ ಮತ್ತು ಅಶೋಕ್ ಗಸ್ತಿ ಒಳ್ಳೆಯ ನಾಯಕರಾಗಿದ್ದರು ಎಂದು ಹೇಳಿದರು.

ಸುರೇಶ್ ಅಂಗಡಿ ಕೆಲವೇ ದಿನಗಳಲ್ಲಿ ಸಿಎಂ ಆಗುತ್ತಿದ್ದರು. ಈ ಸಂಬಂಧ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು ಎಂದು ಈ ಹಿಂದೆ ಸುರೇಶ್ ಅಂಗಡಿ ಸೋದರಮಾವ ಲಿಂಗರಾಜ್ ಪಾಟೀಲ್ ಹೇಳಿದ್ದರು. ಇದೀಗ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಸುರೇಶ್ ಅಂಗಡಿ ಸಿಎಂ ಆಗುತ್ತಿದ್ದರು ಅನ್ನೋ ವಿಷಯ ರಿವೀಲ್ ಮಾಡಿದ್ದಾರೆ.

ಲಿಂಗರಾಜ್ ಪಾಟೇಲ್ ಹೇಳಿದ್ದು ಏನು?:  ನಾಲ್ಕು ತಿಂಗಳ ಹಿಂದೆ ಸುರೇಶ್ ಅಂಗಡಿ ಸಿಎಂ ಮಾಡುವ ಕುರಿತು ದೆಹಲಿಯಲ್ಲಿ ಸಭೆ ನಡೆದಿತ್ತು. ಕರ್ನಾಟಕ ಉಸ್ತುವಾರಿ ಮುರಳೀಧರ್ ರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೆಹಲಿಯ ಪ್ರಮುಖ ನಾಯಕರು ಅಂದು ಭಾಗಿಯಾಗಿದ್ದರು. ಒಳ್ಳೆಯ, ಸಜ್ಜನ ರಾಜಕಾರಣಿ ಮತ್ತು ಲಿಂಗಾಯತ ಮುಖಂಡ ಎಂಬ ಕಾರಣಕ್ಕೆ ಸುರೇಶ್ ಅಂಗಡಿಯವರಿಗೆ ಸ್ಥಾನ ನೀಡಲು ಮಾತುಕತೆ ನಡೆದಿತ್ತು. ಈ ವಿಚಾರವನ್ನು ಸುರೇಶ್ ಅಂಗಡಿ ನನಗೆ ತಿಳಿಸಿದ್ದರು ಎಂದು ಲಿಂಗರಾಜ್ ಪಾಟೇಲ್ ಹೇಳಿದ್ದರು. ಇದನ್ನೂ ಓದಿ: ಸಂಸದ ಅಂಗಡಿಗೆ ಸಿಎಂ ಪಟ್ಟ ಕಟ್ಟಲು ದೆಹಲಿಯಲ್ಲಿ ನಡೆದಿತ್ತು ಸಭೆ

ಈ ನಡುವೆ ದುರಾದೃಷ್ಟವಶಾತ್ ಸುರೇಶ್ ಅಂಗಡಿಗೆ ವಿಧಿವಶರಾದರು. ಹೀಗಾಗಿ ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ನೀಡುವಂತೆ ನಾನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಸುರೇಶ್ ಅಂಗಡಿ ಪತ್ನಿ ಮಂಗಲಾ, ಮಕ್ಕಳಾದ ಸ್ಪೂರ್ತಿ, ಶ್ರದ್ಧಾ ಇವರ ಪೈಕಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡುವಂತೆ ಲಿಂಗರಾಜ್ ಪಾಟೇಲ್ ಮನವಿ ಮಾಡಿದ್ದರು. ಇದನ್ನೂ ಓದಿ: ಯತ್ನಾಳ್‍ಗಿರೋ ಗಟ್ಸ್ ರಾಜ್ಯ ಬಿಜೆಪಿ ನಾಯಕರಿಗಿಲ್ಲ: ಹೊರಟ್ಟಿ

ವದಂತಿ ಏನಿತ್ತು?: ಕಳೆದ ಒಂದು ವರ್ಷದಿಂದ ಯಡಿಯೂರಪ್ಪ ಉತ್ತರಾಧಿಕಾರಿಯ ಬೇಟೆಯಲ್ಲಿ ತೊಡಗಿರುವ ಹೈಕಮಾಂಡ್, ಈಗಾಗಲೇ ಲಿಂಗಾಯತ ಸಮುದಾಯದ ಮೂವರು ನಾಯಕರನ್ನು ಗುರುತಿಸಿದೆ. ಅಳೆದು ತೂಗಿ ಇದರಲ್ಲಿ ಒಂದು ಹೆಸರನ್ನು ಫೈನಲ್ ಮಾಡುವುದು ಮಾತ್ರ ಬಾಕಿಯಿದೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿತ್ತು. ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಅಧಿಕಾರವಿಲ್ಲ ಎಂಬ ಗೆರೆಯನ್ನು ಈಗಾಗಲೇ ಹಾಕಲಾಗಿದೆ. ಯಡಿಯೂರಪ್ಪನವರಿಗೆ ಈಗ 77 ವರ್ಷ. ಹೀಗಾಗಿ ಪಕ್ಷದ ಭವಿಷ್ಯದ ದೃಷ್ಟಿಯಿಂದ ಶೀಘ್ರ ಉತ್ತರಾಧಿಕಾರಿ ನೇಮಕಕ್ಕೆ ಹೈಕಮಾಂಡ್ ತಯಾರಿ ನಡೆಸುತ್ತಿದೆ. ಇದನ್ನೂ ಓದಿ: ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ-ಮತ್ತೆ ಯತ್ನಾಳ್ ಕಿಡಿ

ಬಿಎಸ್‍ವೈ ಸ್ಥಾನದಲ್ಲಿ ಲಿಂಗಾಯತರನ್ನೇ ಕೂರಿಸಲು ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ. ಈ ಸಂಬಂಧವಾಗಿ ಉತ್ತರ ಕರ್ನಾಟಕದ ಮೂವರು ವ್ಯಕ್ತಿಗಳ ಪೈಕಿ ಓರ್ವ ಸಂಸದರನ್ನು ಗುರುತಿಸಿದೆ. ‘ಆ’ ಮೂವರು ಲಿಂಗಾಯತ ನಾಯಕರ ಸಂಪರ್ಕ, ಪಕ್ಷದಲ್ಲಿ ಮಾಡಿರುವ ಕೆಲಸ ಸೇರಿದಂತೆ ಸಂಪೂರ್ಣ ಜಾತಕವನ್ನು ಹೈಕಮಾಂಡ್ ಕಲೆಹಾಕುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿತ್ತು. ಇದನ್ನೂ ಓದಿ: ಕಾಲಾಯ ತಸ್ಮೈ ನಮಃ – ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ಮಾರ್ಮಿಕ ನುಡಿ

ಉತ್ತರ ಕರ್ನಾಟಕದವರು ಸಿಎಂ ಆಗ್ತಾರೆ: ಬಿಎಸ್‍ವೈ ಸಿಎಂ ಆಗಿ ಬಹಳ ದಿನ ಉಳಿಯುವುದಿಲ್ಲ. ಕೇಂದ್ರ ಸರ್ಕಾರದವರಿಗೂ ಸಿಎಂ ಬಿಎಸ್‍ವೈ ಸಾಕಾಗಿ ಹೋಗಿದ್ದಾರೆ. ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗುತ್ತಾರೆ. ಉತ್ತರ ಕರ್ನಾಟಕದವರು 100 ಶಾಸಕರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುತ್ತಾರೆ. ಆದರೆ ಉಳಿದ ಭಾಗದಲ್ಲಿ ಕೇವಲ 15 ಶಾಸಕರು ಬಿಜೆಪಿಯಿಂದ ಗೆದ್ದು ಅವರಲ್ಲೇ ಒಬ್ಬರು ಸಿಎಂ ಆಗುತ್ತಾರೆ. ಹೀಗಾಗಿ ಮುಂದಿನ ಬಾರಿ ಉತ್ತರ ಕರ್ನಾಟಕದವರೇ ಸಿಎಂ ಆಗೋದು ಪಕ್ಕಾ. ಜೊತೆಗೆ ಉತ್ತರ ಕರ್ನಾಟಕದವರನ್ನೇ ಸಿಎಂ ಮಾಡುವ ಭರವಸೆಯನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು.

Comments

Leave a Reply

Your email address will not be published. Required fields are marked *